ಹಟ್ಟಿ ಚಿನ್ನದ ಗಣಿ: ‘ಚಿನ್ನದ ಗಣಿಯ ಭ್ರಷ್ಟ ಆಡಳಿತದಿಂದ ಗಣಿ ಉಳಿಸಿ ಬೆಳಸುವ ಯೋಜನೆ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ ) ಹೊಂದಿದೆ. ಎಐಟಿಯುಸಿ ಸಂಘಟನೆ ಗಣಿ ಕಾರ್ಮಿಕರಿಗೆ ಕೊಡಿಸಬೇಕಾದಂತ ಕನಿಷ್ಠ ಸವಲತ್ತು ಕೊಡಿಸುವಲ್ಲಿ ವಿಫಲವಾಗಿದೆ’ ಎಂದು ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಆರ್. ಮಾನಸಯ್ಯ ಆಪಾದಿಸಿದರು.
ಕಾರ್ಮಿಕ ಸಂಘದ ಚುನಾವಣೆ ಸಂಬಂಧ ಬುಧವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಈ ಸಲ ಮತ್ತೆ ಎಐಟಿಯುಸಿ ಕೈಗೆ ಅಧಿಕಾರ ಹೋದರೆ ಗಣಿ ಸ್ಮಶಾನ, ಆಸ್ಪತ್ರೆ ಮರಣೋತ್ತರ ಕೇಂದ್ರವಾಗುತ್ತದೆ ಎಂದರು. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಚಿನ್ನದ ಗಣಿ ಅಭಿವೃದ್ಧಿಗಾಗಿ ವಾರ್ಷಿಕ ₹ 1000 ಕೋಟಿ ಸಹಾಯ ಧನ ಪಡೆಯಲು ಟಿಯುಸಿಐ ಹೋರಾಟ ರೂಪಿಸಲಿದೆ’ ಎಂದು ಹೇಳಿದರು.
ಟಿಯುಸಿಐ ಚುನಾವಣೆ ಚಿಹ್ನೆಯಾದ ಸೈಕಲ್ ಗುರುತಿಗೆ ಮತಹಾಕುವಂತೆ ಕಾರ್ಮಿಕರಲ್ಲಿ ಮನವಿ ಮಾಡಿದರು.
ಹಟ್ಟಿ ಚಿನ್ನದ ಗಣಿಯಲ್ಲಿ ಎಐಟಿಯುಸಿ ಖಾಸಗೀಕರಣ ಪೋಷಿಸಿಕೊಂಡು ಬಂದಿದೆ ಎಂದು ಟಿಯುಸಿಐ ವತಿಯಿಂದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ಎಂ. ಡಿ. ಅಮೀರ್ ಅಲಿ ಆಪಾದಿಸಿದರು. ಟಿಯುಸಿಐ ಅಭ್ಯರ್ಥಿಗಳಾದ ವಾಲೇಬಾಬು, ಬಾಬು ಭೂಪುರ ಮಾತನಾಡಿದರು. ಟಿಯುಸಿಐ ಮುಖಂಡರು ಇದ್ದರು.
***
ಉತ್ತರ ಮತ್ತು ದಕ್ಷಿಣ ಭಾಗ<br/>ದಲ್ಲಿ ಚಿನ್ನದ ನಿಕ್ಷೇಪವಿರುವ ಕಡೆ ಗಣಿಗಳನ್ನು ಆರಂಭಿಸಬೇಕು. 5ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವ ಯೋಜನೆ ಇದೆ
ಆರ್. ಮಾನಸಯ್ಯ,ಅಧ್ಯಕ್ಷ, ಟಿಯುಸಿಐ ರಾಜ್ಯ ಘಟಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.