ADVERTISEMENT

ಚಿನ್ನರ ಅಂಗಳವಾದ `ಕೃಷಿ ಮೇಳ'

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:05 IST
Last Updated 4 ಡಿಸೆಂಬರ್ 2012, 6:05 IST

ರಾಯಚೂರು:  ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ 3ನೇ ಮತ್ತು ಕೊನೆಯ ದಿನವಾದ ಸೋಮವಾರ  ರೈತರ ಕೃಷಿ ಜಾತ್ರೆಗಿಂತ ಮಕ್ಕಳ ಜಾತ್ರೆಯಾಗಿ ಪರಿವರ್ತನೆಗೊಂಡಿತ್ತು.

ಜಿಲ್ಲೆಯ ವಿವಿಧ ಭಾಗಗಳಿಂದ ಪ್ರಾಥಮಿಕ ಶಾಲೆಯ ಸಾವಿರಾರು ಮಕ್ಕಳು ಕೃಷಿ ವಿವಿ ಆವರಣಕ್ಕೆ ಧಾವಿಸಿ ಕಲಿ ನಲಿ, ಚಿನ್ನರ ಅಂಗಳ, ವನಭೋಜನವನ್ನು ಅಕ್ಷರಶಃ ಅನುಭವಿಸಿದರು. ಕೃಷಿ ವಿವಿ ಆವರಣದಲ್ಲಿ ಬೆಳೆದ ವಿವಿಧ ಬೆಳೆಗಳ ತಾಕು ಪ್ರದರ್ಶನ, ಕೃಷಿ ಯಂತ್ರೋಪಕರಣ, ತೋಟಗಾರಿಕೆ ಬೆಳೆಗಳು, ಜಾನುವಾರು ಪ್ರದರ್ಶನ, ಬೇಳೆ ಕಾಳು, ಬಿತ್ತನೆ ಬೀಜ, ಕೃಷಿ ಸಂಶೋಧನೆ  ಮಾದರಿಗಳು ಶಾಲಾ ಮಕ್ಕಳು ಮತ್ತು ಅವರ ಶಿಕ್ಷಕರನ್ನು ಹೊಸ ಜಗತ್ತಿಗೆ ಕರೆದೊಯ್ದಿದ್ದವು.

ಸಾಲುಗಟ್ಟಿ ಕೃಷಿ ವಸ್ತು ಪ್ರದರ್ಶನ ಮಳಿಗೆ ವೀಕ್ಷಣೆ ಮಾಡಲು ಕೃಷಿ ವಿವಿ ವ್ಯವಸ್ಥೆ ಮಾಡಿದ್ದರಿಂದ ಆಯಾ ಶಾಲೆಯ ಶಿಕ್ಷಕರು ಶಾಲಾ ಮಕ್ಕಳನ್ನು ಕರೆದು ಕೃಷಿ ವಸ್ತು ಪ್ರದರ್ಶನ ವೀಕ್ಷಣೆ ಮಾಡಿಸಿದರು. ಶಿಕ್ಷಣ ಇಲಾಖೆಯ ಪ್ರತಿ ಕ್ಷಸ್ಟರ್ ಮಟ್ಟಕ್ಕೆ ಒಂದು ಬಸ್ ವ್ಯವಸ್ಥೆ ಮಾಡಿಕೊಟ್ಟಿದ್ದರಿಂದ ಶಾಲೆಯ ಮಕ್ಕಳು ಬುತ್ತಿ ಕಟ್ಟಿಕೊಂಡು ಬಂದು ವೀಕ್ಷಣೆ ಮಾಡಿದರು.

ತುಂತುರು ನೀರಾವರಿ ಪ್ರದರ್ಶನ, ಭೂಸಮತಟ್ಟು ಮಾಡುವ ಭಾರಿ ಗಾತ್ರದ ಕೃಷಿ ಯಂತ್ರಗಳು ಮಕ್ಕಳನ್ನು ಆಕರ್ಷಿಸಿದವು. ಗಿಡದ ಕೆಳಗೆ ಕುಳಿತು ವನಭೋಜನ ಮಾಡಿದರು.

ಶಿಕ್ಷಕರ ಅನಿಸಿಕೆ: ಈ ರೀತಿ ಕೃಷಿ ಮೇಳಕ್ಕೆ ಪ್ರತಿ ವರ್ಷ ಶಾಲಾ ಮಕ್ಕಳನ್ನು ಕರೆತರುವ ವ್ಯವಸ್ಥೆ ಮಾಡುವುದರಿಂದ ಶಾಲಾ ಮಕ್ಕಳ ಬೌದ್ಧಿಕ ವಿಕಾಸಕ್ಕೆ, ಬಾಹ್ಯ ಜಗತ್ತಿನ ವಿಚಾರಗಳ ಬಗ್ಗೆ ಗೊತ್ತಾಗುತ್ತದೆ. ಪ್ರತಿ ವರ್ಷ ಈ ರೀತಿ ವ್ಯವಸ್ಥೆ ಮಾಡಬೇಕು. ಶಾಲಾ ಕೊಠಡಿ ಆಚೆಗಿನ ಈ ರೀತಿ ಜ್ಞಾನ ನಮ್ಮಂಥ ಶಿಕ್ಷಕರಿಗೂ ಅವಶ್ಯ. ಶಾಲಾ ಮಕ್ಕಳನ್ನು ಕರೆತರುವ ಮೂಲಕ ನಾವೂ ಹೆಚ್ಚು ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆ, ಸಂಶೋಧನೆಗಳ ಬಗ್ಗೆ ಅರಿಯಲು ಸಹಕಾರಿ ಆಗುತ್ತದೆ ಎಂದು ಎಲೆಬಿಚ್ಚಾಲಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಆನಂದ ಹೇಳಿದರು.

ಪದಾಧಿಕಾರಿಗಳ ಆಯ್ಕೆ
ಸಿಂಧನೂರು: ತಾಲ್ಲೂಕಿನ ಅರಗಿನಮರಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ.ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.

ಮಾನಪ್ಪ ಗದ್ದೆಪ್ಪ (ಅಧ್ಯಕ್ಷ), ತಿಪ್ಪಮ್ಮ ಬಸವರಾಜ (ಉಪಾಧ್ಯಕ್ಷರು), ಹನುಮಂತ ತಿಮ್ಮಣ್ಣ, ಮರಿಯಮ್ಮ ಕನಕಪ್ಪ, ಶಿವಪ್ಪ, ಗಂಗಮ್ಮ ವೀರಪ್ಪ, ಅಮರಯ್ಯ, ರೆಹಮಾನಬೀ ದಾವಲಸಾಬ, ಉಮಾದೇವಿ ಶಿವಾಜಿರಾವ್ (ಸದಸ್ಯರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT