ADVERTISEMENT

`ಜಾತ್ರೆ ಸಹೋದರತ್ವ ಸಂಕೇತ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:45 IST
Last Updated 4 ಸೆಪ್ಟೆಂಬರ್ 2013, 6:45 IST

ಲಿಂಗಸುಗೂರ(ಮುದಗಲ್ಲ): ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಆಧರಿಸಿ ಜನತೆ ಹರಿದು ಹಂಚಿಹೋಗುವ ವ್ಯವಸ್ಥೆಯನ್ನು ಒಗ್ಗೂಡಿಸಿ, ಹಬ್ಬ, ಹರಿದಿನ, ಜಾತ್ರಾಮಹೋತ್ಸವದಂತಹ ಆಚರಣೆಗಳ ಮೂಲಕ ಪರಸ್ಪರ ಭಾಗವಹಿಸುವಿಕೆ ಅವಕಾಶ ಕಲ್ಪಿಸಿದ ಇಂತಹ ಆಚರಣೆಗಳು ಸಹೋದರತ್ವದ ಸಂಕೇತಗಳಾಗಿವೆ ಎಂದು ತಿಂಥಣಿ ಕನಕಗುರು ಪೀಠದ ಸಿದ್ಧರಾಮನಂದಪುರಿ ಸ್ವಾಮಿಗಳು ಬಣ್ಣಿಸಿದರು

ಮಂಗಳವಾರ ಮೇಗಳಪೇಟೆಯ ಆರಾಧ್ಯ ದೈವ ಜ್ಞಾನೇಶ್ವರ (ಗ್ಯಾನಪ್ಪಯ್ಯ) ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಂಗ್ರಾಣಿ ಕಲ್ಲು, ಭಾರದ ಚೀಲ ಎತ್ತುವ ಸ್ಪರ್ಧೆಗಳ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗ್ಯಾನಪ್ಪಯ್ಯನವರು ತಮ್ಮ ಕಾಯಕನಿಷ್ಠೆಯಿಂದ ಜ್ಞಾನೇಶ್ವರರಾಗಿ ಗುರ್ತಿಸಿಕೊಂಡರು. ತಾವು ಕೂಡ ಕಾಯಕದಲ್ಲಿ ನಂಬಿಕೆ ಇರಿಸಿ, ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ರಾಮಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಬೆಂಡೋಣಿ ಚೆನ್ನಬಸವಸ್ವಾಮಿ, ಮೇಗಳಪೇಟೆಯ ಸಂಜೀವಪ್ಪಯ್ಯ, ಸಿದ್ದಯ್ಯ ಹೊರಪೇಟೆ ನೇತೃತ್ವ ವಹಿಸಿದ್ದರು. ಹಿರಿಯ ಗುತ್ತಿಗೆದಾರ ನಾಗಪ್ಪ ವಜ್ಜಲ ಸಂಗ್ರಾಣಿ ಕಲ್ಲು ಮತ್ತು ಭಾರದ ಚೀಲ ಎತ್ತುವ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಪಪಂ ಸದಸ್ಯೆ ಶರಣಮ್ಮ ನಂದಪ್ಪ ಕತ್ತಿ. ಮುಖಂಡರಾದ ಅಮೀರಬೇಗ ಉಸ್ತಾದ, ರಫೀಕ್, ರಾಮನಗೌಡ ಸಂದಿಮನಿ, ದುರುಗಪ್ಪ, ಗ್ಯಾನಪ್ಪಯ್ಯ, ಚೆನ್ನಬಸವ, ಅಯ್ಯಣ್ಣ, ನಿಂಗಪ್ಪ, ಬಸಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.