ADVERTISEMENT

ಜೋಳ ಅಕ್ರಮ ಮಾರಾಟ: ಜಪ್ತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:25 IST
Last Updated 15 ಅಕ್ಟೋಬರ್ 2012, 8:25 IST

ಮಾನ್ವಿ: ಪಟ್ಟಣದ ಕರಡಿಗುಡ್ಡ ರಸ್ತೆಯಲ್ಲಿರುವ ಗೋದಾಮಿನಲ್ಲಿ ಕಳಪೆ ಜೋಳಕ್ಕೆ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಉತ್ತಮ ಗುಣಮಟ್ಟದ ಜೋಳ ಎನ್ನುವಂತೆ ಪರಿವರ್ತಿಸಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ರೈತ ಸಂಘದ ಕಾರ್ಯಕರ್ತರು ಭಾನುವಾರ ಪತ್ತೆ ಹಚ್ಚಿದ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೋದಾಮನ್ನು ಜಪ್ತಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಜಗದೀಶಯ್ಯ ಸ್ವಾಮಿ ಮಲ್ಲಿನಮಡುಗು, ಹಂಪಣ್ಣ ಜಾನೇಕಲ್, ವಿಶ್ವನಾಥರೆಡ್ಡಿ ಜೀನೂರು, ಬಿ.ವೆಂಕಟರಾವ್. ಬಾಲಾಜಿ ಜೀನೂರು ಕ್ಯಾಂಪ್ ಮತ್ತಿತರ ಕಾರ್ಯಕರ್ತರು ಭಾನುವಾರ ಸದರಿ ಗೋದಾಮಿಗೆ ತೆರಳಿ,  ಕಳಪೆ ಗುಣಮಟ್ಟದ ಜೋಳವನ್ನು ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ.

ರಾಸಾಯನಿಕಗಳನ್ನು ಮಿಶ್ರಣ ಮಾಡಿ ಉತ್ತಮ ಗುಣಮಟ್ಟದ ಜೋಳ ಎನ್ನುವಂತೆ ಬಿಂಬಿಸಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.  ಕಡಿಮೆ ದರಕ್ಕೆ ಖರೀದಿಸಿದ ಜೋಳವನ್ನು ರಾಸಾಯನಿಕ ಮಿಶ್ರಣದ ನಂತರ ಉತ್ತಮ ಜೋಳವಾಗಿ ಪರಿವರ್ತಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮೂಲಕ ವಂಚಿಸಲಾಗುತ್ತಿದೆ ಎಂದು ದೂರಿದರು.

ಕಂದಾಯ ಹಾಗೂ ಆಹಾರ ಭದ್ರತಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಗೋದಾಮಿನಲ್ಲಿರುವ ಜೋಳವನ್ನು ಪರಿಶೀಲಿಸುವಂತೆ ಅವರು ಒತ್ತಾಯಿಸಿದರು. ಗೋದಾಮಿನ ಮಾಲೀಕ ಸ್ಥಳದಲ್ಲಿರದ ಕಾರಣ  ಗೋದಾಮು ಜಪ್ತಿ ಮಾಡಿದ ಅಧಿಕಾರಿಗಳು ಮಾಲೀಕ ಬಂದ ನಂತರ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಕೆಲತಿಂಗಳ ಹಿಂದೆ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಇಂತಹದೇ ಪ್ರಕರಣವನ್ನು ರೈತ ಸಂಘದ ಕಾರ್ಯಕರ್ತರು ಪತ್ತೆ ಹಚ್ಚಿದ್ದರು. ಇದೀಗ ಮಾನ್ವಿ ಪಟ್ಟಣದಲ್ಲಿಯೂ ಈ ಅಕ್ರಮ ದಂಧೆ ನಡೆಯುತ್ತಿರುವ ಸಂಗತಿ ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.