ADVERTISEMENT

ದಲಿತರಿಗೆ ಸಾಮಾಜಿಕ ಬಹಿಷ್ಕಾರ: ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:11 IST
Last Updated 1 ಜನವರಿ 2014, 9:11 IST

ರಾಯಚೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿ ಗದ್ಯಾಳ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಖಂಡಿಸಿ ಸಿಪಿಐ(ಎಂ) ತಾಲ್ಲೂಕು ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಾಮಾಜಿಕ ಬಹಿಷ್ಕಾರಕ್ಕೆ ಕಾರ ಣರಾದವರನ್ನು ಬಂಧಿಸಿದ ನಂತರ ಗ್ರಾಮದಲ್ಲಿ ಭಯ ಮತ್ತು ಬಹಿಷ್ಕಾರ ಈಗಲೂ ಮುಂದುವರಿದಿದೆ. ಶಾಲೆಯಲ್ಲಿ ಸವರ್ಣೀಯರ ಮಕ್ಕಳು ಮಾತನಾಡಿಸಲಾರದಂತಹ ಪರಿಸ್ಥಿತಿ ಮುಂದುವriದಿದೆ ಎಂದು ತಿಳಿಸಿದರು.

ಬಹಿಷ್ಕಾರಕ್ಕೆ ಕಾರಣರಾದವರ ಮೇಲೆ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡಗಳ  ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿದರು.

ದಿನಸಿ ಅಂಗಡಿ, ಹೋಟೆಲ್ ಹಾಗೂ ಕ್ಷೌರದ ಅಂಗಡಿ ಮಾಲೀಕರು ಸೇವೆ ಒದಗಿಸಲು ನಿರಾಕರಿಸಿದರೆ ಅಂಥವರ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದರು.

4 ತಿಂಗಳಿಂದ ಉದ್ಯೋಗ ಇಲ್ಲದೆ ತೊಂದರೆ ಗೊಳಗಾದ ದಲಿತ ಕುಟುಂಬಕ್ಕೆ ಕನಿಷ್ಠ ₨25 ಸಾವಿರ ನಿರುದ್ಯೋಗ ಪರಿಹಾರ ನೀಡಬೇಕು, ಉದ್ಯೋಗ ಖಾತರಿ ಕೆಲಸ ನೀಡಬೇಕು, ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶೇ 7ರಷ್ಟು ಉದ್ಯೋಗ ಹಾಗೂ ಶೈಕ್ಷಣಿಕ ವಲಯ ದಲ್ಲಿ ಮೀಸಲಾತಿ ಕಲ್ಪಿಸಿ ಜಾರಿಗೆ ತರಬೇಕು ಎಂದು ಸಿಪಿಐ(ಎಂ) ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಕೆ.ಜಿ ವೀರೇಶ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಡಿ.ಎಸ್. ಶರಣಬಸವ, ಫರೀದಾ, ಪಾರ್ವತಿ, ಮಧು, ಆಶಾಬಿ, ದೇವಮ್ಮ,ಚನ್ನಬಸಯ್ಯ, ಶ್ರೀಧರ, ರವಿ, ಜಿಲಾನಿಪಾಷಾ, ಶಾಮಸುಂದರ್, ವೀರಭದ್ರ ಇತರರು ಇದ್ದರು.

ಮಾನ್ವಿ ವರದಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗದ್ಯಾಳ ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಖಂಡಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬಹಿಷ್ಕಾರಕ್ಕೆ ಕಾರಣರಾದ ಆರೋಪಿಗಳನ್ನು ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ದಿನಸಿ ಅಂಗಡಿ, ಹೋಟೆಲ್‌, ಕ್ಷೌರ ಅಂಗಡಿಗಳ ಮಾಲೀಕರು ದಲಿತರಿಗೆ ಸೇವೆ ಒದಗಿಸಲು ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸಬೇಕು. 4 ತಿಂಗಳಿಂದ ಉದ್ಯೋಗವಿಲ್ಲದೆ ತೊಂದರೆಗೆ ಒಳಗಾದ ದಲಿತರಿಗೆ ಕನಿಷ್ಠ ₨25 ಸಾವಿರ ಪರಿಹಾರ ನೀಡಬೇಕು.

ಉದ್ಯೋಗ ಖಾತರಿ ಯೋಜನೆ ಅಡಿ ಯಲ್ಲಿ ಕೂಲಿ ಕೆಲಸ ನೀಡಬೇಕು. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್‌ ಎಂ.ಐ. ಶಹನೂರು ಅವರಿಗೆ ಸಲ್ಲಿಸಿದರು.
ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ಎಚ್‌.ಶರ್ಪುದ್ದೀನ್‌ ಪೋತ್ನಾಳ, ಸದಸ್ಯರಾದ ಡಿ.ವೀರನಗೌಡ, ಸಿದ್ದಲಿಂಗಯ್ಯ, ಡಿ.ಮಲ್ಲಿಕಾರ್ಜುನ, ಮೇಷಕ್‌, ಎಂ.ನಾಗರಾಜ, ಜಹೀರ್‌ ಪಾಷಾ ಇತರರು ಇದ್ದರು.

ಸಿಂಧನೂರು ವರದಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಗದ್ಯಾಳ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿದ ಘಟನೆ ಖಂಡಿಸಿ ಭಾರತ ಕಮ್ಯೂನಿಷ್ಟ್‌ ಪಕ್ಷ (ಮಾರ್ಕ್ಸವಾದಿ) ತಾಲ್ಲೂಕು ಘಟಕದಿಂದ ಈಚೆಗೆ ಪ್ರತಿಭಟನೆ ನಡೆಸಲಾಯಿತು.

ರಾಜ್ಯದಲ್ಲಿ ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಸರ್ಕಾರ ಹೆಚ್ಚಿನ ಕಾಳಜಿ ವಹಿಸದೆ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದ ದಲಿತ ಸಮುದಾಯ ಭಯದಿಂದ ಜೀವನ ನಡೆಸುವಂತಾಗಿದೆ ಎಂದು ದೂರಿದರು.

ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ರಾಜಕೀಯ ಲಾಬಿಗೆ ಮಣಿಯಬಾರದು. ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.

ಗದ್ಯಾಳ ಗ್ರಾಮದ ದಲಿತ ಕುಂಟುಂಬಗಳಿಗೆ ₨ 25 ಸಾವಿರ ಪರಿಹಾರ, ನಿರುದ್ಯೋಗಿ ಯುವ ಕರಿಗೆ ಉದ್ಯೋಗ ತರಬೇತಿ ಹಾಗೂ ತೊಂದರೆಗೆ ಒಳಗಾದ ಗ್ರಾಮದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ತಾಲ್ಲೂಕು ಘಟಕದ ಕಾರ್ಯದರ್ಶಿ ನರಸಿಂಹಪ್ಪ, ಅಪ್ಪಣ್ಣ ಕಾಂಬಳೆ, ಯಂಕಪ್ಪ ಕೆಂಗಲ್‌, ಶಾರದಮ್ಮ, ವಾಣಿ. ಎಸ್‌.ಖಾದ್ರಿ, ಈ.ಬಸವರಾಜ, ಚಂದ್ರಪ್ಪ. ಎಸ್‌. ದೇವೇಂದ್ರಗೌಡ, ಮುರ್ತುಜ ಡ್ರೈವರ್, ವಿಠಲ್‌ ಬಿಎಸ್‌ಎನ್‌ಎಲ್‌, ರಾಮು ರಾಠೋಡ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT