ದೇವದುರ್ಗ: ತಾಲ್ಲೂಕಿನ ಹುನೂರು ಗ್ರಾಮದ ಮುಖ್ಯರಸ್ತೆಗೆ ನಿರ್ಮಿಸಲಾದ ಸೇತುವೆ ಮುರಿದು ಬಿದ್ದು ವರ್ಷ ಕಳೆದರೂ ಇಂದಿಗೂ ದುರಿಸ್ತಿ ಕಾಣದೆ ಇರುವುದರಿಂದ ಗ್ರಾಮದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹುನೂರು ಗ್ರಾಮದ ಜನರು ಸುಮಾರು ನೂರಾರು ವರ್ಷಗಳ ಕಾಲ ಬೆಳಗಾದರೆ ಸಾಕು ಎದೆಮಟ್ಟದ ಹಳ್ಳದ ನೀರು ದಾಟಿ ಜೀವನ ಸಾಗಿಸಿದ ನಂತರ ಕಳೆದ ಮೂರು ವರ್ಷಗಳ ಹಿಂದೆ ಹಳ್ಳಕ್ಕೆ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಸೇತುವೆ ನಿರ್ಮಿಸಿ ವರ್ಷ ಕಳೆಯುವುದರಲ್ಲಿಯೇ ಸೇತುವೆ ಕಳಪೆ ಕಾಮಗಾರಿಯಿಂದ ಮುರಿದು ಬಿದ್ದಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತಕಡೆ ಸುಳಿದ ಉದಾಹರಣೆ ಇಲ್ಲ.
ಇದೇ ಗ್ರಾಮದ ಜನರಿಗೆ ಇದೇ ಮುಖ್ಯರಸ್ತೆಯಾಗಿರುವುದರಿಂದ ಸಂಜೆಯಾದರೆ ಸಾಕು ಸೇತುವೆ ದಾಟುವಾಗ ಜೀವ ಕೈಯಲ್ಲಿ ಹಿಡಿದುಕೊಂಡಿ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಸ್ವಲ್ಪ ಎಚ್ಚರ ತಪ್ಪಿದರೆ ಸಾಕು ನೇರವಾಗಿ ಹಳ್ಳದ ನೀರಿಗೆ ಬೀಳುವ ಅಪಾಯ ಇದ್ದು ಕೂಡಲೇ ದುರಸ್ತಿ ಕಾಣಬೇಕಾಗಿದೆ.
ನಿರ್ಲಕ್ಷ್ಯ: ಅಪಾಯಕ್ಕೆ ಕಾರಣವಾಗಿರುವ ಹುನೂರು ಸೇತುವೆ ದುರಿಸ್ತಿಯನ್ನು ಕೊಡಲೇ ದುರಿಸ್ತಿಗೊಳಿಸಲು ಗ್ರಾಮಸ್ಥರು ಅನೇಕ ಬಾರಿ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮತ್ತು ತಾಲ್ಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನ ಕಂಡಿಲ್ಲ ಎಂದು ಗ್ರಾಮದ ಕರಿಯಪ್ಪ ಅವರು `ಪ್ರಜಾವಾಣಿ~ ಮುಂದೆ ತಮ್ಮ ತೊಂದರೆಯನ್ನು ಹೇಳಿಕೊಂಡನು.
ಹುನೂರು ಗ್ರಾಮದ ರೈತರು ಬೆಲೆದ ಬೆಳಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ರಸ್ತೆ ಸರಿಯಾಗಿ ಇಲ್ಲದ ಕಾರಣ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ರೈತರೇ ಮುಖ್ಯರಸ್ತೆವರೆಗೂ ಹೊತ್ತುಕೊಂಡು ಹೋಗಬೇಕಾಗಿದೆ. ಶಾಲೆಯ ಮಕ್ಕಳು ಸೇತುವೆ ದಾಟಿಯೇ ಹೋಗಬೇಕಾಗಿರುವುದರಿಂದ ಮರಳಿ ಮನೆಗೆ ಬರುವರಿಗೂ ಅವರಕಡೆಯೇ ಚಿಂತೆ ಎನ್ನುತ್ತಾರೆ ಗ್ರಾಮದ ಮಹಾದೇವಮ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.