ADVERTISEMENT

ಧರ್ಮದಲ್ಲಿ ರಾಜಕಾರಣ ಬೇಡ:ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 9:50 IST
Last Updated 17 ಫೆಬ್ರುವರಿ 2011, 9:50 IST

ಸಿರವಾರ: ರಾಜಕಾರಣದಲ್ಲಿ ಧರ್ಮವಿರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ನುಸುಳುಬಾರದು ಎಂದು ರಂಭಾಪುರಿ ಜಗದ್ಗುರುಗಳು ಅಭಿಪ್ರಯಾಪಟ್ಟರು. ಅವರು ಬುಧವಾರದಂದು ಮಾನವಿ ತಾಲ್ಲೂಕಿನ ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರ ಪಟ್ಟಾಧಿಕಾರ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿ, ಇಂದಿನ ದಿನಗಳಲ್ಲಿ ಧರ್ಮದಲ್ಲಿ ರಾಜಕಾರಣ ನುಸುಳಿ ಧರ್ಮವನ್ನು ಸಂಕಟಕ್ಕೀಡು ಮಾಡಿದೆ, ಕಾವಿ ಧಾರಣ ಮಾಡಿಕೊಂಡವರು ತ್ರಿಕರಣಪೂರ್ಣ ಶುದ್ಧಿಯಿಂದ ಸೇವೆ ಮಾಡಿದರೆ ಲೋಕದ ಹಿತವನ್ನು ಕಾಪಾಡಲಿಕ್ಕೆ ಸಾಧ್ಯವಿದೆ. ಜಾತಿಗಳನ್ನು ಬೆಂಬಲಿಸುವದಕ್ಕಿಂತ ಧರ್ಮವನ್ನು ಬೆಂಬಲಿಸಿದರೆ ದೇಶಕ್ಕೆ ಉಜ್ವಲವಾದ ಭವಿಷ್ಯವಿದೆ.

ಮಠಗಳು ಎಲ್ಲಾ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸಬೇಕು, ಮಠಗಳು ಹಣ ಮಾಡುವ ಕೇಂದ್ರಗಳಾಗದೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಬೇಕು ಎಂದರು. ಭಾಷೆ, ಜಾತಿ, ಪ್ರಾಂತ್ಯಗಳ ಹೆಸರಿನಲ್ಲಿ ವಿಘಟನೆ ನಡೆಯುತ್ತಿದೆ, ಮಠಗಳ ಮೇಲೆ ಗುರುತರ ಜವಬ್ದಾರಿ ಹೆಚ್ಚಿದೆ, ಇಂದು ಧಾರ್ಮಿಕ ರಂಗವನ್ನು ಒಳಗೊಂಡು ಎಲ್ಲಾ ರಂಗಗಳೂ ವಿಫಲವಾಗಿವೆ, ಆದರೂ ಕೂಡ ಧರ್ಮಪೀಠಗಳಲ್ಲಿ ಅಲ್ಪಸ್ವಲ್ಪ ನಂಬಿಕೆ ಉಳಿದುಕೊಂಡಿದೆ ಎಂದು ವಿಷಾದಿಸಿದರು.

ಮಾನ್ವಿ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಇಂದು ಕಾವಿಯ ಮೇಲೆ ಎಲ್ಲರ ಕಣ್ಣು ಇದೆ, ನಮ್ಮ ನೈತಿಕತೆಯನ್ನು ಕಾಪಾಡಿಕೊಂಡು ಹೋದರೆ ಭಕ್ತ ಸಮೂಹವನ್ನೇ ನಿರ್ಮಾಣ ಮಾಡಬಹುದು ಎಂದು ಹೇಳಿದರು. ಮಾಜಿ ಸಂಸದ ಎ.ವೆಂಕಟೇಶ ನಾಯಕ ಮಾತನಾಡಿದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ, ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ್, ಮಾಜಿ ಶಾಸಕ ಗಂಗಾಧರ ನಾಯಕ, ಜೆ.ಶರಣಪ್ಪ ಗೌಡ, ವೀರಯ್ಯ ಸ್ವಾಮಿ, ಎನ್.ಗಿರಿಜಾಶಂಕರ, ಚುಕ್ಕಿ ಸೂಗಪ್ಪ ಸಾಹುಕಾರ, ಜೆ.ದೇವರಾಜ ಪಾಟೀಲ, ಜಿಪಂ ಸದಸ್ಯ ಕೆ.ಅಸ್ಲಂಪಾಷಾ, ತಾಪಂ ಸದಸ್ಯರಾದ ದಾನುನಗೌಡ, ಸಿದ್ರಾಮಯ್ಯ ಸ್ವಾಮಿ ಇನ್ನಿತರ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.