ADVERTISEMENT

ಧರ್ಮದ ವಿಚಾರ ಸಂಕುಚಿತತೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 8:45 IST
Last Updated 25 ಫೆಬ್ರುವರಿ 2012, 8:45 IST

ಲಿಂಗಸುಗೂರ: ಪ್ರಪಂಚದ ಪ್ರತಿಯೊಂದು ಧರ್ಮಗಳು ತಮ್ಮದೆ ಆದ ಸಿದ್ಧಾಂತಗಳನ್ನು ಪ್ರತಿಬಿಂಬಿಸಿವೆ. ಅಂದಾಕ್ಷಣ ಪೂಜೆ-ಪುನಸ್ಕಾರ, ನಮಾಜ, ಪ್ರಾರ್ಥನೆ ಮಾಡುವುದು ಮಾತ್ರ ಧರ್ಮವಲ್ಲ. ಧರ್ಮದ ಅರ್ಥ ವಿಶಾಲವಾಗಿದೆ. ಕಾರಣ ಯಾವುದೇ ಒಂದು ಧರ್ಮದ ಬಗ್ಗೆ ಸಂಕುಚಿತ ಭಾವನೆ ಸಲ್ಲದು ಎಂದು ಲಾಲಹುಸೇನ್ ಕಂದಗಲ್ ಅಭಿಮತ ವ್ಯಕ್ತಪಡಿಸಿದರು.

ಗುರುವಾರ ಲಿಂಗೈಕ್ಯ ಶ್ರೀ ವಿಜಯಮಹಾಂತ ಶಿವಯೋಗಿಗಳ ಶತಮಾನೋತ್ಸವದ ವಿಶೇಷ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಧರ್ಮದ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಕಾಣಬಹುದು. ಆದರೆ, ಆ ಎಲ್ಲಾ ಧರ್ಮಗಳು ಭಾವೈಕ್ಯತೆ ಸಂದೇಶ ನೀಡಿರುವುದನ್ನು ಒಪ್ಪಿಕೊಳ್ಳಬೇಕು. ಧರ್ಮ ಚಾರಿತ್ರ್ಯವನ್ನು ನಿರ್ಮಿಸುತ್ತದೆ. ಆದರೆ, ವಿದ್ಯಾವಂತ ಸಮುದಾಯ ಸಮಾಜವನ್ನು ಹಾಳುಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಸಾನಿಧ್ಯ ವಹಿಸಿದ್ದ ಇಳಕಲ್ಲಿನ ಗುರು ಮಹಾಂತಸ್ವಾಮಿಗಳು, ಶಾಸಕ ಮಾನಪ್ಪ ವಜ್ಜಲ, ಹಟ್ಟಿ ಚಿನ್ನದ ಗಣಿ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ಎಲ್. ಪಾಟೀಲ ಮಾತನಾಡಿ, ಕರಡಕಲ್ಲ ಶ್ರೀ ಮಠದಲ್ಲಿ ಸ್ಥಳೀಯ ಪುರಸಭೆ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಿರುವುದು ಔಚಿತ್ಯಪೂರ್ಣವಾಗಿದೆ. 12ನೇ ಶತಮಾನದಲ್ಲಿ ಶರಣರು ಹೇಳಿದ ನಿಜವಾದ ಕಾಯಕ ಜೀವಿಗಳು ಅಂದರೆ ಪೌರ ಕಾರ್ಮಿಕರು ಎಂದು ಶ್ಲಾಘಿಸಿದರು.

ಇಳಕಲ್ಲಿನ ಮಹಾಂತಪ್ಪ ಅಪ್ಪಗಳು ಸಾನಿಧ್ಯ ವಹಿಸಿದ್ದರು. ಲಿಂಗಸುಗೂರ ಶಾಖಾ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಪ್ರವಚನಕಾರ ಈಶ್ವರ ಮಂಟೂರ ಪ್ರವಚನ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.