ADVERTISEMENT

ನೆಮ್ಮದಿ ಕೇಂದ್ರಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 6:50 IST
Last Updated 2 ಜೂನ್ 2011, 6:50 IST

ಮಸ್ಕಿ: ಪಟ್ಟಣದ ಗ್ರಾಮ ಪಂಚಾಯಿತಿ ಆವರಣಕ್ಕೆ ಹೊಂದಿಕೊಂಡಿರುವ `ನೆಮ್ಮದಿ~ ಕೇಂದ್ರಕ್ಕೆ ಬುಧವಾರ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕೊಡುವಂತೆ ಒತ್ತಾಯಿಸಿದರು.
ಕಳೆದ ಒಂದು ತಿಂಗಳಿನಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಕೊಟ್ಟುರೂ ಇದುವರೆಗೆ ಪ್ರಮಾಣಪತ್ರ ಕೊಟ್ಟಿಲ್ಲ ಎಂದು ಮಟ್ಟೂರಿನ ಹನುಮಂತ ದೂರಿದರು.

ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಬೇಕಾದರೆ 15 ರೂ. ಶುಲ್ಕ ಕಟ್ಟಬೇಕು. ಅದರ ಬದಲು 50 ರಿಂದ 100 ರೂಪಾಯಿ ಕೊಟ್ಟರೆ ಮಾತ್ರ ಪ್ರಮಾಣಪತ್ರ ಕೊಡುತ್ತಾರೆ. ಇಲ್ಲದಿದ್ದರೆ ವಿನಾಕಾರಣ ಸಬೂಬು ಹೇಳುತ್ತಾರೆ ಎಂದು ಶರಣಬಸವ ಆರೋಪಿಸಿದರು.

ಕಳೆದ 15 ದಿನಗಳಿಂದ ಪ್ರಮಾಣ ಪತ್ರಕ್ಕಾಗಿ ಅಲೆಯುತ್ತಿದ್ದೇವೆ ಎಂದು ಅಮರೇಶ ಅಲವತ್ತುಕೊಂಡಿದ್ದು, ಇದರಿಂದಾಗಿ ಬೇಸತ್ತು ಮುತ್ತಿಗೆ ಹಾಕಿ ರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ವಿಶೇಷ ತಹಸೀಲ್ದಾರ ನಿವೃತ್ತಿಯಾಗಿದ್ದು, ಅವರ ಸ್ಥಳದಲ್ಲಿ ಬೇರೆಯವರನ್ನು ನಿಯುಕ್ತಿಗೊಳಿಸಿಲ್ಲ. ಇದರಿಂದಾಗಿ ನೆಮ್ಮದಿ ಕೇಂದ್ರದವರು ಹಣಕ್ಕಾಗಿ ಸತಾಯಿಸುತ್ತಿದ್ದು, ಹಣ ಕೊಟ್ಟರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎನ್ನುವಂತಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಯಮನೂರು ಒಡೆಯರ ಆರೋಪಿಸಿದ್ದಾರೆ.

ಅರ್ಜಿ ಕೊಟ್ಟ ಒಂದು ವಾರದಲ್ಲಿ ಪ್ರಮಾಣ ಪತ್ರ ಕೊಡುತ್ತೇವೆ. ಆದರೆ ಕಂಪ್ಯೂಟರ್ ಟ್ಯೂನರ್ ಇಲ್ಲದಿರುವುದರಿಂದ ವಿಳಂಬವಾಗಿದೆ ಎಂದು ನೆಮ್ಮದಿ ಕೇಂದ್ರದ ಶ್ರೀಧರ ಮತ್ತು ಅಮರೇಶ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.