ADVERTISEMENT

ಪುರಸಭೆ ನಿರ್ಧಾರದಂತೆ ವಿಸ್ತರಣೆ:ಎಸಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 9:00 IST
Last Updated 5 ಫೆಬ್ರುವರಿ 2011, 9:00 IST

ದೇವದುರ್ಗ: ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಶಂಭುಲಿಂಗೇಶ್ವರ ದೇವಸ್ಥಾನವರೆಗಿನ ಮುಖ್ಯ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಪುರಸಭೆ ಕೈಗೊಂಡ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಫೆ. 7ರ ವರೆಗೂ ಕಟ್ಟಡ ಮಾಲೀಕರಿಗೆ ಗಡುವು ನೀಡಲಾಗಿದ್ದು ನಂತರ ಕಟ್ಟಡ ತೆರವು ಕಾರ್ಯಚರಣೆ ನಡೆಯಲಿದೆ ಎಂದು ರಾಯಚೂರು ಸಹಾಯಕ ಆಯುಕ್ತ ಪಿ.ಡಿ. ಚವ್ಹಾಣ  ತಿಳಿಸಿದರು.

ಶುಕ್ರವಾರ ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆಯ ನಿರ್ಧಾರದಂತೆ ಒಟ್ಟು 34 ಅಡಿಗಳಿಗೆ ತೆರವುಗೊಳಿಸಲು ಜ.30ರಂದು ಪುರಸಭೆ ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಅದರನ್ವಯ ಫೆ. 7 ರಂದು ಗಡವು ಮುಗಿಯಲಿದ್ದು, ಫೆ. 8ರಂದು ಮುಂಜಾನೆ ತಹಸೀಲ್ದಾರರು ಮತ್ತು ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತದೆ ಎಂದರು.

ಗಂಭೀರ ಪ್ರಕರಣ: ಫೆ. 8 ರಂದು ಕಚೇರಿ ಕೆಲಸಗಳನ್ನು ಬಿಟ್ಟು ಮೊದಲು ತೆರವು ಕಾರ್ಯಚರಣೆ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮಾರೆಪ್ಪ ಮತ್ತು ಮುಖ್ಯಾಧಿಕಾರಿ ಚಂದ್ರಶೇಖರ ಅವರಿಗೆ ಸೂಚಿಸಿದ ಅವರು, ನೆನೆಗುದಿಗೆ ಬಿದ್ದ ತೆರವು ಕಾರ್ಯಾಚರಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಗೊಂದಲ: ಸಿದ್ರಾಮೇಶ್ವರ ವಾರ್ಡ್ ನಾಗರಿಕರು ಮನವಿ ಸಲ್ಲಿಸಿ 24 ಅಡಿಗಳಿಗೆ ಮಾತ್ರ ವಿಸ್ತರಿಸಬೇಕು ಎಂದು ಕೇಳಿಕೊಂಡರೆ  ಮುಖ್ಯ ರಸ್ತೆಯ (ಬಜಾರ್) ಅಂಗಡಿ ಮಾಲೀಕರು ತಹಸೀಲ್ದಾರರಿಗೆ ಮನವಿ  ಸಲ್ಲಿಸಿ 24 ಅಡಿಗಳಿಗೆ ಬದಲಾಗಿ 34 ಅಡಿಗಳಷ್ಟು ತೆರವು ಕಾರ್ಯಾಚರಣೆ ನಡೆಯಬೇಕು ಎಂದು ಹೇಳಿದರುವುದರಿಂದ ಗೊಂದಲವಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.30 ರಂದು ಸಿದ್ರಾಮೇಶ್ವರ ವಾರ್ಡಿನ ಮುಖ್ಯರಸ್ತೆಯ ಕಟ್ಟಡ ಮಾಲೀಕರಿಗೆ ಪುರಸಭೆ ನೋಟಿಸ್ ಜಾರಿಗೊಳಿಸಿದೆ.

ತೊಂದರೆ: ತೆರವಿನಿಂದ ಒಂದು ತಿಂಗಳಿಂದ ವ್ಯಾಪಾರ, ವಹಿವಾಟುಗಳು ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿವೆ. ವ್ಯಾಪಾರಸ್ಥರಿಗೆ ತೊಂದರೆ ಎದುರಾಗಿದೆ. ಮದುವೆ ಮತ್ತು  ಹಬ್ಬಗಳು ಹತ್ತಿರ ಬರುತ್ತಿರುವ ಜತೆಗೆ ಮಳೆಗಾಲ ಆರಂಭವಾಗುವುದರಿಂದ ತೆರವುಗೊಳಿಸಿದ ಕಟ್ಟಡಗಳನ್ನು ಕಟ್ಟಿಕೊಳ್ಳಲು ಹಗಲು, ರಾತ್ರಿ ಎನ್ನದೇ ಮಾಲೀಕರು ಮುಂದಾಗಿರುವುದು ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.