ರಾಯಚೂರು: ನಗರಸಭೆ ದಿನಗೂಲಿ ಪೌರಕಾರ್ಮಿಕರ ವೇತನ ಪಾವತಿಸಬೇಕು ಹಾಗೂ ಮೃತ ಕಾರ್ಮಿಕನ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಗರಸಭೆ ಪೌರಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳ ಬಾಕಿ ವೇತನ ಪಾವತಿಸಬೇಕು ಹಾಗೂ ಮೃತ ಕಾರ್ಮಿಕ ವೆಂಕಟೇಶ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಕಾರ್ಮಿಕರು ಬಂದಿದ್ದರು.
ಆದರೆ ಕಾರ್ಮಿಕರನ್ನು ಹೊರ ಕಳುಹಿಸುವಂತೆ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಪೊಲೀಸರಿಗೆ ಆದೇಶ ನೀಡಿದರು. ಈ ಹಿನ್ನೆಲೆಯಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಹೊರ ಕಳುಹಿಸಿದ ಜಿಲ್ಲಾಧಿಕಾರಿ ಕ್ರಮವನ್ನು ಖಂಡಿಸಿದರು. ನಂತರ ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ನಗರಸಭೆ ದಿನಗೂಲಿ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ. ನಗರಸಭೆಯ 40 ಜನ ಪೌರಕಾರ್ಮಿಕರ ಮೂರು ತಿಂಗಳ ವೇತನ ಪಾವತಿಸಬೇಕು, ಮೃತ ಕಾರ್ಮಿಕರ ವೆಂಕಟೇಶ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನಗರಸಭೆ ದಿನಗೂಲಿ ಕಾರ್ಮಿಕರ ಮುಖಂಡ ಅಂಬಣ್ಣ ಆರೋಲಿಕರ್, ಕೆ.ಸುಬ್ಬರಾಯಡು, ಗೋಪಿನಾಥ, ವೆಂಕಟರಮಣ ಸೇರಿದಂತೆ ಅನೇಕ ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.