ADVERTISEMENT

ಪ್ರತಿಭಾವಂತರನ್ನು ಪ್ರೋತ್ಸಾಹಿಸಿ: ಶಾಸಕ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:12 IST
Last Updated 5 ಆಗಸ್ಟ್ 2013, 10:12 IST

ಲಿಂಗಸುಗೂರ: ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭಾನ್ವಿತ ಮಕ್ಕಳು ಆರ್ಥಿಕ ಅಡಚಣೆಯಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇಂತಹ ದಿನಗಳಲ್ಲಿ ಹಾಲುಮತ ನೌಕರರ ಸಂಘ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಕಾಗಿನೆಲೆ ಕನಕಗುರು ಪೀಠದ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಶ್ಲಾಘಿಸಿದರು.
ಭಾನುವಾರ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿ ಮಕ್ಕಳಲ್ಲಿ ಪ್ರತಿಭೆ ಇದೆ. ಪ್ರತಿಭೆ ಹೊರಹೊಮ್ಮಲು ಉತ್ತಮ ಪರಿಸರ, ಸಹಕಾರ ನೀಡುವ ಜೊತೆಗೆ ಮಕ್ಕಳಲ್ಲಿನ ಆತ್ಮಶಕ್ತಿ ವೃದ್ಧಿಗೆ ಹೆಚ್ಚಿನ ನಿಗಾ ವಹಿಸಬೇಕು. ಪಾಲಕರು ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದರು.
ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು. ರಾಯಚೂರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಸರ್ಕಾರದ ಅಧೀನ ಕಾರ್ಯದರ್ಶಿ ಚಂದ್ರಶೇಖರ ಮುದಗಲ್ಲ, ಉಪವಿಭಾಗಾಧಿಕಾರಿ ಟಿ. ಯೋಗೇಶ ಮಾತನಾಡಿದರು.

ಸನ್ಮಾನ: ಚಂದ್ರಶೇಖರ ಮುದಗಲ್ಲ, ಮಲ್ಲನಗೌಡ ಗೌಡರ, ಪಾಲಾಕ್ಷಿ ಮೂಲಮನಿ, ಶರಣಪ್ಪ ಆನೆಹೊಸೂರು, ಸಾಬಣ್ಣ ವಗ್ಗರ, ಫಕೀರಪ್ಪ, ಶರಣಮ್ಮ, ಭೀಮಣ್ಣ ನಾಯಕ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ, ಹಾಲುಮತ ಸಮಾಜದ ಬಂಧುಗಳನ್ನು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು.

ಶಿವಾನಂದ ನರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಾಲುಮತ ಸಮಾಜದ ತಾಲ್ಲೂಕು ಅಧ್ಯಕ್ಷ ಬೀರಪ್ಪ ಪೂಜಾರಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಯೋಗಪ್ಪ. ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಭೀಮಣ್ಣ ನಾಯಕ. ಮುಖಂಡರಾದ ನಾಗಪ್ಪ ವಜ್ಜಲ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.