ADVERTISEMENT

ಬರಗಾಲದಲ್ಲೂ ಸಂಕ್ರಮಣ ಸಡಗರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 10:25 IST
Last Updated 14 ಜನವರಿ 2012, 10:25 IST

ರಾಯಚೂರು: ಬರಗಾಲ... ಬೆಳೆಗೆ ತಗ್ಗಿದ ಬೆಲೆ... ರೈತಾಪ ವರ್ಗದಲ್ಲಿ ಸಂಕ್ರಮಣದ ಹಬ್ಬದ ಸಂಭ್ರಮವನ್ನು ಕುಗ್ಗಿಸಿದೆ.

ಆದರೆ ನಗರ ಪ್ರದೇಶದಲ್ಲಿ ಸಂಕ್ರಮಣ ಹಬ್ಬದ ಸಡಗರಕ್ಕೆ ತಯಾರಿ. ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚಿನ ತರಕಾರಿ ಮಾರಾಟಕ್ಕೆ ವ್ಯಾಪಾರಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ಪ್ರಮುಖ ರಸ್ತೆ, ಬಡಾವಣೆಯಲ್ಲಿರುವ ರೊಟ್ಟಿ ಕೇಂದ್ರಗಳು ಸಂಕ್ರಮಣ ಹಬ್ಬದ ವಿಶೇಷ ಅಡುಗೆ ತಯಾರಿಯಲ್ಲಿ ಮಗ್ನವಾಗಿವೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಹಲವು ಬಗೆಯ ಚಟ್ನಿ, ಅತ್ರಾಸ್ ಎಂಬ ಸಿಹಿ ತಿನಿಸು, ಹೋಳಿಗೆ, ಸಂಕ್ರಾಂತಿ ಹಬ್ಬದ ವಿಶೇಷ ಪಲ್ಯ ಎಂದೇ ಕರೆಯಲ್ಪಡುವ ಎಲ್ಲ ತರಕಾರಿಗಳನ್ನೊಳಗೊಂಡ ಬರ್ತಾ ಎಂಬ `ಪಲ್ಯ~ ತಯಾರಿಸಲಾಗುತ್ತಿದೆ. ಅಷ್ಟೇ ಅಲ್ಲ ಬೆಣ್ಣೆ ಮಾರಾಟ ಜೋರಾಗಿದೆ.

ಸಂಕ್ರಮಣ ಎಂದ ಮೇಲೆ ಪ್ರತಿ ಮನೆ ಮನೆ ಮುಂದೆ ಬಗೆ ಬಗೆಯ ರಂಗೋಲಿ ಇರಲೇಬೇಕು. ಸಂಕ್ರಮಣ ದಿನ ರಂಗೋಲಿ ಹಾಕಿ ಅದಕ್ಕೆ ಬಣ್ಣ ತುಂಬುವ ಸಿದ್ಧತೆಯಲ್ಲಿ ಗೃಹಿಣಿಯರು ತೊಡಗಿದ್ದಾರೆ. ನಗರದ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬಣ್ಣ ಖರೀದಿ ಜೋರಾಗಿದ್ದುದು ಶುಕ್ರವಾರ ಕಂಡು ಬಂದಿತು.
ಅಷ್ಟೇ ಅಲ್ಲ. ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗವು ಶ್ರೀಶೈಲ, ಧರ್ಮಸ್ಥಳ, ಕೃಷ್ಣಾ, ಮಹಾನಂದಿ, ಕೂಡಲಸಂಗಮ, ಹಂಪಿ ಹೀಗೆ ಹಲವು ಕ್ಷೇತ್ರಗಳಿಗೆ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಿದೆ.

ಸೋಲಾಪುರ: ಇಟಲಿ ರೋಟರಿ ತಂಡ ಭೇಟಿ
ಸೋಲಾಪುರ: ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ `ಫ್ರೆಂಡ್‌ಷಿಪ್ ಎಕ್ಸ್‌ಚೇಂಜ್~ (ಸ್ನೇಹ ಸಮ್ಮಿಲನ) ವೈಶಿಷ್ಟ್ಯಪೂರ್ಣ ಕಾರ್ಯಕ್ರಮದ ಅಂಗವಾಗಿ ಇಟಲಿಯ ಮಿಲಾನ್‌ನಿಂದ 15 ರೋಟರಿ ಸದಸ್ಯರು ಈಚೆಗೆ ಸೋಲಾಪುರಕ್ಕೆ ಆಗಮಿಸಿ, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇಟಲಿಯ ಸಿಮೋನೆತಾ, ಮಾವೋರೊ, ಎಲಿನೋರಾ, ಡ್ಯಾನಿಯಲ್, ಮರಿಯಾ, ಒಮರ್, ಪಾವ್ಲಾ,ರಾಬರ್ಟ್ , ಪಿಯೇರಾ, ಗ್ರೀಕೋ, ಒಝಾನಾ, ಸ್ಯಾಡೋ, ಆ್ಯನಾ,  ಬಿನಾಕಿ ಹಾಗೂ ಪಾವ್ಲಾ ನಗರಕ್ಕೆ ಆಗಮಿಸಿದ್ದ ಅತಿಥಿಗಳಾಗಿದ್ದರು. ಈ ತಂಡದಲ್ಲಿ ಹೃದ್ರೋಗ ತಜ್ಞರು, ವಕೀಲರು, ಪ್ರಾಧ್ಯಾಪಕರು, ಉದ್ಯಮಿಗಳು, ವಿವಿಧ ರಂಗದ ತಜ್ಞರು ಇದ್ದರು. ಇವರು ಸಿದ್ಧೇಶ್ವರ ದೇವಸ್ಥಾನ, ದಮಾಣಿ ಅಂಗವಿಕಲರ ಶಾಲೆ, ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾಪಂಚಾಯಿತಿ ಕಾರ್ಯಾಲಯ ಮುಂತಾದ ಕಡೆಗಳಿಗೆ ಭೇಟಿ ನೀಡಿ ಮಾಹಿತಿ ವಿನಿಮಯ ಮಾಡಿದರು. ವಿದೇಶಿ ಅತಿಥಿಗಳಿಗೆ ಡಾ. ಪಠಾಣಕರ, ಡಾ.ಜಯಂತಿ ಅಡಕೆ, ಡಾ. ಸುನೀಲ  ವೈದ್ಯ, ಡಾ. ಸಂಜೀವ ಭಂಡಾರಿ, ಸುನೀಲ ದಾವಡಾ, ಡಾ. ರಾಜಶೇಖರ ಯೇಳೀಕರ, ಶ್ರೀಕಾಂತ ಕುಲಕರ್ಣಿ, ಬಾಬೂ ಭಾಯಿ ಮೆಹ್ತಾ ಹಾಗೂ ಡಾ. ಸಚಿನ್ ಜಮ್ಮಾ  ಇವರ ಮನೆಗಳಲ್ಲಿ ವಾಸ್ತವ್ಯ ಒದಗಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.