ಶಕ್ತಿನಗರ: ಬೇಸಿಗೆಯಲ್ಲಿ ಬಿಸಿಲಿನ ಝುಳದ ಜತೆಗೆ ನೀರಿನ ಕೊರತೆಯೂ ಜನರನ್ನು ಕಾಡುತ್ತಿದೆ. ಹೀಗಿರುವಾಗ ರಾಯಚೂರು ತಾಲ್ಲೂಕಿನ ಯರಗುಂಟ ಗ್ರಾಮದ ರೈತ ಗುಲಾಮ ಹುಸೇನ್ ಅವರು ಕೃಷಿಹೊಂಡದಲ್ಲಿ ಸಂಗ್ರಹವಾಗಿದ್ದ ನೀರು ಬಳಸಿಕೊಂಡು ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.
ಮಳೆಯಿಂದ ಕೃಷಿಹೊಂಡದಲ್ಲಿ ನೀರು ಸಂಗ್ರಹವಾಗಿದೆ. ಅಲ್ಲದೆ, ಕಾಲುವೆ ನೀರನ್ನೂ ಅವರು ಕೃಷಿ ಹೊಂಡದಲ್ಲಿ ಸಂಗ್ರಹಿಸುತ್ತಾರೆ.
ಕಳೆದ ವರ್ಷ ಕಡಿಮೆ ಮಳೆ ಆಗಿರುವುದರಿಂದ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರು ಕಂಗಲಾಗಿದ್ದಾರೆ. ಆದರೆ, ಗುಲಾಮ ಹುಸೇನ್ ಅವರು ನೀರಿನ ಕೊರತೆ ಇದ್ದರೂ ಎದೆಗುಂದಿಲ್ಲ. 2 ಎಕರೆ 31 ಗುಂಟೆ ಜಮೀನಿನಲ್ಲಿ ಕೃಷಿ ಇಲಾಖೆ ಯೋಜನೆ ಅಡಿ ₹35 ಸಾವಿರ ವೆಚ್ಚದಲ್ಲಿ ನಿರ್ಮಿಸಿರುವ 18 ಮೀಟರ್ ಆಳದ ಕೃಷಿ ಹೊಂಡವು ಅವರ ಕೈಹಿಡಿದಿದೆ.
ಕೃಷಿ ಹೊಂಡದ ನೀರು ಬಳಸಿಕೊಂಡು 2 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ‘ಭತ್ತ, ಶೇಂಗಾ, ತರಕಾರಿಗಳನ್ನು ಬೆಳೆದಿದ್ದೇನೆ. ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಕೃಷಿ ಇಲಾಖೆಯ ಯೋಜನೆಯಡಿ ಕೃಷಿಹೊಂಡ, ಬದುಗಳನ್ನು ನಿರ್ಮಿಸಿಕೊಂಡು ಮಿಶ್ರ ಬೆಳೆ ಬೆಳೆದರೆ ಲಾಭ ಖಂಡಿತ ಸಿಗುತ್ತದೆ’ ಎನ್ನುತ್ತಾರೆ ರೈತ ಜಿ.ಹುಸೇನ್.
ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಾರದು ಎನ್ನುವ ಕಾರಣದಿಂದ ಕೃಷಿ ಹೊಂಡದಲ್ಲಿ ಕಾಲುವೆ ನೀರು ಸಂಗ್ರಹಿಸುತ್ತೇನೆ. ನೀರಿನ ಸಮಸ್ಯೆ ಎಂದು ಆಗಿಲ್ಲ ಎಂದರು.
**
ಕೃಷಿ ಇಲಾಖೆಯ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಗುಲಾಮ ಹುಸೇನ್ಗೆ ಅದರಲ್ಲಿ ಯಶಸ್ವಿಯಾಗಿದ್ದು, ಇತರ ರೈತರಿಗೆ ಮಾದರಿಯಾಗಿದ್ದಾರೆ
– ಮಾನಸವೀಣಾ ಅಧಿಕಾರಿ, ಕೃಷಿ ಇಲಾಖೆ, ದೇವಸೂಗೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.