ಜಾಲಹಳ್ಳಿ: ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡು ಮನೆಗಳಿಗೆ ನೀರು ನುಗ್ಗಿತು. ಪಟ್ಟಣದ ವಾರ್ಡ್ ಸಂಖ್ಯೆ 1ರಲ್ಲಿ ಭೀಮಪ್ಪ ಕಂಬಾರ, ಯಂಕಪ್ಪ ಕಂಬಾರ, ನಿಂಗಪ್ಪ ಕಂಬಾರ ಇವರ ಮನೆಗಳಿಗೆ ಮಳೆ ನೀರು ನುಗ್ಗಿ ಬಟ್ಟೆ, ದಾವಸ ದಾನ್ಯ ಸೇರಿದಂತೆ ಮನೆಯಲ್ಲಿರುವ ಅಗತ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಗ್ರಾ.ಪಂ ಅಧ್ಯಕ್ಷ ರಂಗನಾಥ ಮಕಾಶಿ, ಪಿಡಿಒ ಭೀಮರಾಯ ನಾಯಕ ಸೋಮವಾರ ಸಂತ್ರಸ್ತರಿಗೆ ₹ 5 ಸಾವಿರ ಸಹಾಯಧನ ನೀಡಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. 33 ಕೆ.ವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಹ ನೀರು ನುಗ್ಗಿದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ವಿದ್ಯುತ್ ಸರಬರಾಜು ಮಾಡಲು ಯಂತ್ರಗಳ ಪಕ್ಕದಲ್ಲಿ ಶಾಹಬಾದಿ ಬಂಡೆಗಳನ್ನು ಹಾಕಿಕೊಂಡು ಅದರ ಮೇಲೆ ನಡೆದಾಡಿಕೊಂಡು ದುರಸ್ತಿ ಕಾರ್ಯ ಕೈಗೊಂಡರು.
ಅಂಬೇಡ್ಕರ್ ವೃತ್ತದಿಂದ ರಂಗನಾಥ ದೇವಸ್ಥಾನದವರೆಗೆ ರಸ್ತೆ ಕೆಸರು ಗದ್ದೆಯಾಗಿದೆ. ವಾಹನಗಳು ಸಂಚಾರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ 9ವಾರ್ಡ್ಗಳಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ರಸ್ತೆಯ ಮೇಲೆ ಮಳೆ ನೀರು ಹಾಗೂ ಚರಂಡಿ ಮಲೀನ ನೀರು ಹರಿಯಿತು. ಒಂದು ವರ್ಷದಿಂದ ಮಳೆ ಮಾಪನ ಯಂತ್ರ ದುರಸ್ತಿಗೊಳ್ಳದೇ ಇರುವುದಿಂದ ಪಟ್ಟಣದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ ಸದಸ್ಯ ನರಸಣ್ಣ ನಾಯಕ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.