ಸಿಂಧನೂರು: ತಾಲ್ಲೂಕಿನ ನಿಡಿಗೋಳ ಗ್ರಾಮದ 50ಕ್ಕೂ ಹೆಚ್ಚು ಜನರು ಮದುವೆ ಊಟ ಸೇವಿಸಿ ಅಸ್ವಸ್ಥಗೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಘಟನೆ ಶುಕ್ರವಾರ ನಡೆದಿದೆ.
ನಿಡಿಗೋಳ ಗ್ರಾಮದ ಬಸಣ್ಣ ಸಾಹುಕಾರ ಅವರ ಪುತ್ರಿಯ ವಿವಾಹ ಸಿದ್ಧಾಪುರ ಗ್ರಾಮದಲ್ಲಿ ನಡೆಯಿತು. ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಹಾಗೂ ಅವರ ಸಂಬಂಧಿಕರು ಭೋಜನ ಮುಗಿಸಿಕೊಂಡು ಸಿಂಧನೂರಿಗೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಕಾರಟಗಿಯಲ್ಲಿ ಕೆಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಇನ್ನೂ ಕೆಲವರಿಗೆ ಸ್ಥಳದಲ್ಲಿಯೇ ವಾಂತಿ, ಬೇಧಿಯ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು ಎಂದು ತಿಮ್ಮನಗೌಡ ನಿಡಿಗೋಳ ತಿಳಿಸಿದರು.
‘ಮದುವೆ ಸಮಾರಂಭದಲ್ಲಿ ವಿಷಹಾರ ಸೇವನೆಯಿಂದಾಗಿ ಗ್ರಾಮಸ್ಥರು ವಾಂತಿ ಬೇಧಿಗೆ ತುತ್ತಾಗಿದ್ದಾರೆ. ರಾತ್ರಿ ವೇಳೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಮಾರು 50ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಈಗ ಗುಣಮುಖರಾಗಿದ್ದಾರೆ’ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗರಾಜ ಕಾಟವಾ ಎಂದು ‘ಪ್ರಜಾವಾಣಿ’ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.