ರಾಯಚೂರು: ಪ್ರತಿಯೊಬ್ಬ ಮಹಿಳೆ ಶಿಕ್ಷಣ ಪಡೆಯಬೇಕು. ಮಹಿಳೆಯರು ಯಾವುದೇ ಕ್ಷೇತ್ರವಿರಲಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜಾಗೃತಿ ಬಿ ದೇಶಮಾನೆ ಹೇಳಿದರು.
ನಗರದ ತಾರಾನಾಥ ಶಿಕ್ಷಣ ಸಂಸ್ಥೆಯ ಎಸ್ಎಸ್ಜಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತೀಯ ಕುಟುಂಬ ಯೋಜನೆ ಸಂಘದ ವತಿಯಿಂದ (ಎಫ್ಪಿಎಐ) ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳೆಯರಿಗೆ ಶೇ 33ರಷ್ಟು ರಾಜಕೀಯ ಕ್ಷೇತ್ರದಲ್ಲಿ ಪ್ರಾತಿನಿಧ್ಯ ದೊರಕಲು ಹೋರಾಟದ ಅಗತ್ಯ ಇದೆ ಎಂದು ತಿಳಿಸಿದರು.
ನಗರಸಭೆ ಪ್ರಭಾರ ಅಧ್ಯಕ್ಷೆ ಪದ್ಮಾಶ್ರೀನಿವಾಸ ಮಾತನಾಡಿ, ಎಲ್ಲ ಮಹಿಳೆಯರು ಜಾತೀಯತೆ ಮರೆತು ಒಗ್ಗಟ್ಟಾಗಿ ಶೇ 33ರಷ್ಟು ಮೀಸಲಾತಿ ಹಾಗೂ ಲಿಂಗಸಮಾನತೆ ಅನುಷ್ಠಾನ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಿ,ನಂದಗೋಪಾಲ ವಹಿಸಿದ್ದರು. ಎಫ್ಪಿಎಐ ಸಂಸ್ಥೆಯ ಸದಸ್ಯೆ ಈರಮ್ಮ, ವೈದ್ಯಾಧಿಕಾರಿ ಡಾ.ಅನುರಾಧ, ಉಪನ್ಯಾಸಕರಾದ ಶಕುಂತಲಾ ಗೋಪಿಶೆಟ್ಟಿ, ವೆಂಕಟೇಶ, ವಿರುಪಾಕ್ಷಯ್ಯ, ಕಾರ್ಯಕ್ರಮಾಧಿಕಾರಿ ಭೀಮರಾಯ ಜಾಲಿಬೆಂಚಿ, ಶೂಶ್ರುಷಕಿ ಶೋಭಾರಾಣಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.