ಲಿಂಗಸುಗೂರ: ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಸರ್ಕಾರದ ಹಿತ ಮುಖ್ಯವಾಗಿದೆ. ಅದರಲ್ಲೂ ಮುಖ್ಯಮಂತ್ರಿ ಸದಾನಂದ ಗೌಡರಿಗಾಗಿ ಪಕ್ಷದ ತೀರ್ಮಾನದಂತೆ ತಾವು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಎನ್.ಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆರು ತಿಂಗಳ ಅವಧಿಯಲ್ಲಿ ವಿಧಾನಸಭೆ ಅಥವಾ ವಿಧಾನಪರಿಷತ್ನ ಯಾವುದಾದರೂ ಒಂದು ಕಡೆ ಆಯ್ಕೆಗೊಳ್ಳಬೇಕಿದೆ. ಮುಖ್ಯಮಂತ್ರಿಗಾಗಿ ಸ್ಥಾನವನ್ನೇ ತ್ಯಾಗ ಮಾಡಿದ ವಿಷಯದಲ್ಲಿ ತಮಗೆ ತುಂಬಾ ಖುಷಿ ಇದೆ. ಆದರೆ ಯಾವುದೇ ಒಂದು ಸಮಾಜಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಈ ಬಗ್ಗೆ ಆರೋಪ ಮಾಡುವುದರಲ್ಲಿ ಹುರುಳಿಲ್ಲ ಎಂದು ವಿವರಣೆ ನೀಡಿದರು.
ತಾವು ಸಂಘ ಪರಿವಾರದಿಂದ ಬೆಳೆದು ಬಂದವರು. ವೈಯಕ್ತಿಕ ಆಸೆಗಿಂತ ರಾಷ್ಟ್ರ ಮತ್ತು ಪಕ್ಷದ ಹಿತ ಮುಖ್ಯವಾಗಿದೆ. ಮಡಿವಾಳ ಸಮಾಜ ಬಂಧುಗಳಲ್ಲಿ ಅನಗತ್ಯ ಗೊಂದಲಗಳು ಬೇಡ. ಪಕ್ಷ ತಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ವಹಿಸಿಕೊಡಲಿದೆ. ವಹಿಸಿ ಕೊಡದಿದ್ದರು ಚಿಂತೆಯಿಲ್ಲ. ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುವೆ.
ಅಧಿಕಾರವೊಂದಏ ಮುಖ್ಯವಲ್ಲ ಎಂಬುದನ್ನು ಅರಿತುಕೊಳ್ಳುವಂತೆ ಸಮಾಜದ ಬಂಧುಗಳಲ್ಲಿ ಮನವಿ ಮಾಡಿದರು.
ಶಾಸಕ ಪ್ರತಾಪಗೌಡ ಮಸ್ಕಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಮುರಾರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮು ಜೋಷಿ, ಮಸ್ಕಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಲ್ಲಪ್ಪ ಅಂಕುಶದೊಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.