ಲಿಂಗಸುಗೂರ(ಮಸ್ಕಿ): ತಾಲ್ಲೂಕಿನ ಮಸ್ಕಿಯಿಂದ ಕವಿತಾಳ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಾಮಗಾರಿ ರಂಭಗೊಂಡು ಮೂರೂವರೆ ವರ್ಷಗಳಾದರೂ ಪೂರ್ಣಗೊಳ್ಳದೆ ಹೋಗಿರುವುದು ವಿಷಾದನೀಯ. ಈ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ವರ್ಷಗಳು ಬೇಕೊ? ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವವರೆ ಇಲ್ಲದಾಗಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೆಡೆ ರಾತ್ರೋ ರಾತ್ರಿ ರಸ್ತೆಗಳ ಡಾಂಬರೀಕರಣ ನಡೆದಿರುವ ಉದಾಹರಣೆಗಳಿವೆ. ಆದರೆ, ಮಸ್ಕಿ-ಕವಿತಾಳ ರಸ್ತೆಯ ಕೇವಲ 2 ಕಿ.ಮೀ. ರಸ್ತೆ ಮೆಟಲಿಂಗ್ ಮತ್ತು ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬರೋಬ್ಬರಿ ಮೂರೂವರೆ ವರ್ಷಗಳಾಗಿವೆ.
ಮೆಟಲಿಂಗ್ ಮಾತ್ರ ಅಲ್ಲಲ್ಲಿ ಮಾಡಿದ್ದು ಅದು ಕೂಡ ಕಿತ್ತು ಕಂಕರ್ಗಳು ಎದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಶಿವಕುಮಾರ ಪಾಟೀಲ ಆರೋಪಿಸಿದ್ದಾರೆ.
ಇಷ್ಟೊಂದು ಹದಗೆಟ್ಟ ರಸ್ತೆಗಳಲ್ಲಿ ಖಾಸಗಿ ವಾಹನಗಳ ಮಾಲೀಕರು ವಾಹನಗಳಲ್ಲಿ ಟಾಪ್ ಸರ್ವೀಸ್ನಲ್ಲಿ ಪ್ರಯಾಣಿಕರನ್ನು ಕರೆ ತರುತ್ತಾರೆ. ಆದರೆ, ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಮಸ್ಕಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಬಸ್ ಓಡಿಸಲು ಮೀನಾಮೇಷ ಮಾಡುತ್ತಿದ್ದಾರೆ. ಸೇವೆ ಮರೆತು ಕೇವಲ ಲಾಭಕ್ಕಾಗಿ ದೂರದ ಪಟ್ಟಣಗಳಿಗೆ ಬಸ್ ಬಿಡುತ್ತಿರುವ ಬಗ್ಗೆ ಗ್ರಾಮೀಣ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.