ADVERTISEMENT

ವಸತಿ ನಿಲಯಗಳಿಗೆ ಸಿಇಓ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 8:46 IST
Last Updated 17 ಜುಲೈ 2013, 8:46 IST

ಲಿಂಗಸುಗೂರ: ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಸ್ಥಳೀಯ ಬಾಲಕಿಯರ ವಸತಿ ನಿಲಯಗಳಿಗೆ ಮಂಗಳವಾರ ಧಿಡೀರ್ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಜ್ಞಾನಪ್ರಕಾಶ ಅವ್ಯವಸ್ಥೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಸ್ಥಳೀಯ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ಜೊತೆ ಮಾತನಾಡಿದ ಅವರು, ಮಕ್ಕಳಿಗೆ ಅನುಕೂಲ ಆಗುವ ಬೆಳಕಿನ ವ್ಯವಸ್ಥೆ, ಫ್ಯಾನ್ ಸೌಲಭ್ಯದ ಕೊರತೆ, ಕಳಪೆ ಆಹಾರ ನೀಡುವ ಕುರಿತಂತೆ ಮಕ್ಕಳು ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಗೊಂಡ ಅವರು ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರು.

ಯಾವೊಬ್ಬ ಅಧಿಕಾರಿ ಮತ್ತು ವಾರ್ಡ್‌ನ್‌ಗಳು ಸ್ಥಳೀಯವಾಗಿ ಸಿಗದೆ ಹೋದಾಗ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗೆ ಮಾತನಾಡಿ ಅಧಿಕಾರಿಗಳ ಬೇಜವಬ್ದಾರಿತನ ವಾರ್ಡ್‌ನ್‌ಗಳ ನಿರ್ಲಕ್ಷ್ಯತೆ ಬಗ್ಗೆ ಗಮನ ಸೆಳೆದರು. ಸರ್ಕಾರ ಸಾಕಷ್ಟು ಹಣಕಾಸಿನ ನೆರವು ನೀಡಿದರು ಕೂಡ ಗುಣಮಟ್ಟದ ಊಟ, ವಸತಿ ಸೌಲಭ್ಯ ಕಲ್ಪಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

`ಪ್ರಜಾವಾಣಿ' ಜೊತೆ ಮಾತನಾಡಿ, ತಾಲ್ಲೂಕಿನ ವಸತಿ ನಿಲಯಗಳ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮಕ್ಕಳ ಭವಿಷ್ಯ ರೂಪಿಸುವ ವಸತಿ ನಿಲಯಗಳಲ್ಲಿ ಸರ್ಕಾರದ ನೀತಿ, ನಿರ್ದೇಶನದನ್ವಯ ಸೌಲಭ್ಯ ಕಲ್ಪಿಸಬೇಕು. ಇನ್ನೂ ಹದಿನೈದು ದಿನಗಳಲ್ಲಿ ಸೌಲಭ್ಯ ಕಲ್ಪಿಸಿ ಯಾವುದೇ ದೂರು ಬಾರದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.