ಸಿಂಧನೂರು: ತಾಲ್ಲೂಕಿನಲ್ಲಿ ತಲೆದೋರಿರುವ ವಿದ್ಯುತ್ ಕ್ಷಾಮ ಸರಿಪಡಿಸುವಂತೆ ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಶಾಸಕ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ಶ್ರೀಪುರಂ ಜಂಕ್ಷನ್ನಲ್ಲಿರುವ 220ಕೆ.ವಿ. ವಿದ್ಯುತ್ ಉಪಕೇಂದ್ರದ ಮುಂದೆ ಮಂಗಳವಾರ ಧರಣಿ ಸತ್ಯಾಗ್ರಹ ನಡೆಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಶಾಸಕ ನಾಡಗೌಡ, ಕಳೆದ ನಾಲ್ಕು ವರ್ಷಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿ ನೀತಿಯನ್ನು ಅನುಸರಿಸುತ್ತಿದೆ. ಕೇವಲ ವಿದ್ಯುತ್ ಖರೀದಿಗೆ ಆದ್ಯತೆ ನೀಡಿ ರಾಜ್ಯದ ಜನರ ಹಿತವನ್ನು ಕಡೆಗಣಿಸಿದೆ. ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಯಾವುದೇ ಯೋಜನೆಗಳನ್ನು ರೂಪಿಸದೆ ಇರುವುದು ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ತೋರಿಸುತ್ತದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಂ.ಲಿಂಗಪ್ಪ ಮಾತನಾಡಿ, ಕಳೆದ ಹಲವು ದಿನಗಳಿಂದ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ತಾಲ್ಲೂಕಿಗೆ ಅವಶ್ಯಕತೆ ಇರುವ ವಿದ್ಯುತ್ ಪ್ರಮಾಣವನ್ನು ಪಡೆಯುವಲ್ಲಿ ಸ್ಥಳೀಯ ಜೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಜನರು ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ವಿವಿಧ ಇಲಾಖೆಗಳ ಸರ್ಕಾರಿ ಸೇವೆಗಳು ವಿಳಂಬವಾಗುತ್ತಿವೆ. ವಾಣಿಜ್ಯ ವ್ಯವಹಾರಗಳು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿವೆ. ಕಾರಣ ಕೂಡಲೇ ತಾಲ್ಲೂಕಿನ ಉದ್ಭವಿಸಿರುವ ವಿದ್ಯುತ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷ ಎಂ.ಡಿ.ನದೀಮ್ಮುಲ್ಲಾ, ಎಪಿಎಂಸಿ ನಿರ್ದೇಶಕ ರಾಮಬಾಬು, ಮುಖಂಡರಾದ ಅಯ್ಯನಗೌಡ ಆಯನೂರು, ವೆಂಕಟೇಶ ನಂಜಲದಿನ್ನಿ, ವೀರೇಶ ಹಟ್ಟಿ, ವೆಂಕೋಬ ಕಲ್ಲೂರು, ಗೋವಿಂದರಾಜ, ಹನುಮಂತಪ್ಪ ಗುಡಿ, ಮಲ್ಲನಗೌಡ ಮಾವಿನಮಡು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.