ADVERTISEMENT

‘ವೀರಶೈವರ ಅಭಿವೃದ್ಧಿಗೆ ಶ್ರಮಿಸಿದ ಕುಮಾರಸ್ವಾಮಿ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 5:54 IST
Last Updated 3 ಡಿಸೆಂಬರ್ 2017, 5:54 IST

ರಾಯಚೂರು: ವೀರಶೈವ ಲಿಂಗಾಯತ ಸಮುದಾಯದ ಜನರನ್ನು ಸಂಘಟಿಸುವ ಮೂಲಕ ಹಾನಗಲ್‌ ಕುಮಾರಸ್ವಾಮಿ ಅವರು ಸಮುದಾಯದ ಅಭಿವೃದ್ಧಿಗೆ 113 ವರ್ಷಗಳ ಹಿಂದೆಯೇ ಶ್ರಮಿಸಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು.

ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ವೀರಶೈವ ಸಮಾಜದಿಂದ ಶನಿವಾರ ನಡೆದ ಹಾನಗಲ್‌ ಕುಮಾರಸ್ವಾಮಿ ಅವರ 150ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾನಗಲ್‌ ಕುಮಾರಸ್ವಾಮಿ ಅವರು 1904ರಲ್ಲಿ ಬಾಗಲಕೋಟೆಯಲ್ಲಿ ಬಸ ವೇಶ್ವರ ವಿದ್ಯಾ ಸಂಸ್ಥೆ, ಬೆಳಗಾವಿಯಲ್ಲಿ ಲಿಂಗಾಯತ ಶಿಕ್ಷಣ ಸಂಸ್ಥೆ ಹಾಗೂ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಸ್ಥೆ ಸ್ಥಾಪಿಸುವ ಮೂಲಕ ವೀರಶೈವ ಹಾಗೂ ಲಿಂಗಾ ಯತ ಒಂದೇ ಎಂದು ಸಾರಿದ್ದಾರೆ ಎಂದರು.

ADVERTISEMENT

ಸಮುದಾಯಕ್ಕೆ ಆಗುತ್ತಿರುವ ಅನ್ಯಾ ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಧೋರಣೆ ಒಪ್ಪಿಕೊಳ್ಳಲು ಆಗುವುದಿಲ್ಲ. ಸಂವಿಧಾನ ಬದ್ಧ ಸೌಲಭ್ಯಗಳನ್ನು ಕೇಳಿ ಪಡೆಯಬೇಕು. ಧರ್ಮ ಪಾಲನೆ ಮಾಡಿ ಸಮಾಜದ ಋಣ ತೀರಿಸುವ ಕಾರ್ಯವನ್ನು ತಪ್ಪದೇ ಮಾಡಬೇಕು ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರ ಆದರ್ಶ ಅಳವಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಗಳಿಸಿ, ಸಮಾಜಕ್ಕೆ ಕೊಡುಗೆ ನೀಡುವಂತೆ ಬೆಳೆಯಬೇಕು ಎಂದರು.

ಮಾನ್ವಿ ತಾಲ್ಲೂಕಿನ ಬೆಟ್ಟದೂರಿನ ಪ್ರಭುಲಿಂಗೇಶ್ವರ ಮಠದ ಮಹಾದೇವ ಸ್ವಾಮೀಜಿ ಅವರು ವಿಶೇಷ ಉಪನ್ಯಾಸ ನೀಡಿದರು.ಮಟಮಾರಿ ಸಾವಿರ ದೇವರ ಸಂಸ್ಥಾನ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷಎಂ.ಭೀಮರೆಡ್ಡಿ ಮಾತನಾಡಿದರು.

ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ ಬೃಹನ್ಮಠದ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಚ್.ಎಂ.ರೇಣುಕಪ್ರಸನ್ನ,  ಮಹಾಂತಗೌಡ ಗುಮಗೇರಿ, ದಾನಮ್ಮ ಸುಭಾಷಚಂದ್ರ, ಎಂ.ವೀರನಗೌಡ, ಶರಣಬಸಪ್ಪ ಅರಳಿ, ವೈ.ಬಸನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.