ಮಸ್ಕಿ: ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಸೋಮವಾರ ಭೇಟಿ ನೀಡಿದ ಶಾಸಕ ಪ್ರತಾಪಗೌಡ ಪಾಟೀಲ ಕಾಲೇಜಿನ ಸಮಸ್ಯೆಗಳ ಕುರಿತು ಶಿಕ್ಷಕರ ಜತೆ ಚರ್ಚೆ ನಡೆಸಿದರು.
ಕಟ್ಟಡ ಹಳೆಯದಾಗಿದೆ. ಮೇಲ್ಛಾವಣಿ ಕುಸಿಯ ತೊಡಗಿವೆ, ವಿದ್ಯಾರ್ಥಿಗಳು ಭಯದಲ್ಲಿ ಪಾಠ ಕೇಳುವ ಸ್ಥಿತಿ ಇದೆ. 5 ಕೊಠಡಿ ದುರಸ್ತಿಯಾಗಿದೆ. ಉಳಿದ ಕೊಠಡಿಗಳ ದುರಸ್ತಿಗೆ ಮಾಡಿಸಬೇಕು ಎಂದು ಶಿಕ್ಷಕರು ಮನವಿ ಮಾಡಿದರು.
ಆರ್ಎಂಎಸ್ ಯೋಜನೆ ಅಡಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿದ್ದು, ಈಗಿರುವ ಕಾಲೇಜಿನ ಪಕ್ಕದಲ್ಲಿಯೇ ಕಟ್ಟಡ ನಿರ್ಮಿಸುವಂತೆ ಶಾಸಕರು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಸೂಚಿಸಿದರು. ಶಿಥಿಲಗೊಂಡಿರುವ ಕೊಠಡಿಗಳ ದುರಸ್ತಿಗೆ ಕ್ರಮದ ಭರವಸೆ ನೀಡಿದರು.
ಪ್ರಾಚಾರ್ಯರ ಮನವಿ: ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಕುಮಾರಸ್ವಾಮಿ ಮತ್ತು ಉಪನ್ಯಾಸಕರು ಕಾಲೇಜಿಗೆ ಕಟ್ಟಡದ ಕೊರತೆ ಇದೆ. ಕೂಡಲೇ ಹೊಸಕಟ್ಟಡ ನಿರ್ಮಿಸಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲಗೆ ಮನವಿ ಮಾಡಿದರು.
ಹೊಸ ಕಟ್ಟಡಕ್ಕಾಗಿ 42 ಲಕ್ಷ ರೂಪಾಯಿ ಯೋಜನೆಯ ಕಡತ ಸರ್ಕಾರದ ಮಟ್ಟದಲ್ಲಿದೆ. ಕೂಡಲೇ ಅದಕ್ಕೆ ಮುಂಜೂರಾತಿ ದೊರಕಿಸಿಕೊಡ ಬೇಕು ಎಂದು ಅವರು ಹೇಳಿದರು.
ನೂತನ ಕಟ್ಟಡ ಪರಿಶೀಲನೆ: 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕಟ್ಟಡವನ್ನು ಶಾಸಕರು ಪರಿಶೀಲಿಸಿದರು. ಆಗಸ್ಟ್ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಟ್ಟಡ ಉದ್ಘಾಟಿಸಲಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೂ ಭೇಟಿ ನೀಡಿದ ಶಾಸಕರು ಶಿಕ್ಷಕರ ಜತೆ ಸಮಾಲೋಚನೆ ನಡೆಸಿದರು.
ಸ್ಥಳ ಪರಿಶೀಲನೆ: ಮಸ್ಕಿಯಲ್ಲಿನ ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಆಗಸ್ಟ್ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿ ಸುತ್ತಿದ್ದರಿಂದ ಶಾಸಕ ಪ್ರತಾಪಗೌಡ ಪಾಟೀಲ ಕಾರ್ಯಕ್ರಮ ನಡೆಸುವ ಸ್ಥಳದ ಪರಿಶೀಲಿಸಿದರು.
ಶಾಲಾ ಉಸ್ತುವಾರಿ ಸಮಿತಿಗಳ ಅಧ್ಯಕ್ಷರಾದ ಡಾ. ಬಿ.ಎಚ್. ದಿವಟರ್, ಮಲ್ಲಯ್ಯ ಸಾಲಿಮಠ, ಹನುಮಂತಪ್ಪ ವೆಂಕಟಾಪುರ, ವೀರೇಶ ಸೌದ್ರಿ, ಪ್ರಾಚಾರ್ಯ ಬಿ.ಎಸ್. ಕುರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.