ADVERTISEMENT

ಶಿವ... ಶಿವ... ಎಂದ ಶಿವಭಕ್ತರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 5:30 IST
Last Updated 19 ಫೆಬ್ರುವರಿ 2012, 5:30 IST

ರಾಯಚೂರು: ಶಿವರಾತ್ರಿ ಹೊತ್ತಿಗೆ ಬಿಸಿಲಿನ ತಾಪ ಶಿವ.. ಶಿವ..! ಎಂಬ ಮಾತಿದೆ. ಹಾಗೆಯೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಇನ್ನೇನು ಒಂದು ದಿನ ಕಳೆದರೆ ಶಿವಭಕ್ತರು ಕಾಯುತ್ತಿರುವ `ಮಹಾಶಿವರಾತ್ರಿ~ ಆಗಮನ.

ಈ ಮಹಾಶಿವರಾತ್ರಿ ದಿನ ಶಿವನಾಮ ಪಠಿಸಿ ಜಾಗರಣೆ ಮಾಡುವ ಶಿವಭಕ್ತರು ಶಿವರಾತ್ರಿಗಾಗಿಯೇ ಮಾರುಕಟ್ಟೆಗೆ ಧಾವಿಸಿರುವ ವಿವಿಧ ಹಣ್ಣುಗಳ ಬೆಲೆ ಕೇಳಿ ಶಿವರಾತ್ರಿ ಮುನ್ನಾ ದಿನವೇ ಶಿವ... ಶಿವ... ಎನ್ನುತ್ತಿದ್ದಾರೆ!

ಹೌದು ಪ್ರತಿ ವರ್ಷದಂತೆ ಮಹಾಶಿವರಾತ್ರಿ ನಿಮಿತ್ತ ಜಾಗರಣೆ ಮಾಡುವ ಭಕ್ತರ ಹೊಟ್ಟೆ ತಣ್ಣಗಾಗಿಸಲು ನಗರದ ಮಾರುಕಟ್ಟೆ ಪ್ರದೇಶ, ಪ್ರಮುಖ ವೃತ್ತ, ರಸ್ತೆ ಅಕ್ಕಪಕ್ಕ ಹಲವು ಬಗೆಯ ಹಣ್ಣುಗಳ ಮಾರಾಟಕ್ಕೆ ಸಿದ್ಧಗೊಂಡಿವೆ.

ಶಿವರಾತ್ರಿ ಎರಡು ದಿನ್ನ ಮುನ್ನವೇ ಹಣ್ಣುಗಳ ದರ ದುಪ್ಪಟ್ಟು! ಎಂಬುವಷ್ಟು ಗ್ರಾಹಕರನ್ನು ಹೌಹಾರಿಸಿದೆ. ಮುಖ್ಯವಾಗಿ ಕಲ್ಲಂಗಡಿ, ಕರಬೂಜಾ ಹಣ್ಣುಗಳು, ಕರ್ಜೂರ, ದ್ರಾಕ್ಷಿ ಹಣ್ಣಿನ ದರ ಶಿವಭಕ್ತರ ಜೇಬು ಖಾಲಿ ಮಾಡಿಸಲು ನಿಗದಿಪಡಿಸಿದಂತಿದೆ ಅವುಗಳ ದರಗಳು!

ಒಂದು ಅತ್ಯಂತ ಚಿಕ್ಕ ಗಾತ್ರದ ಕಲ್ಲಂಗಡಿ ಬೆಲೆ 20, ಮಧ್ಯಮ 40ರಿಂದ 50, ದೊಡ್ಡ ಕಲ್ಲಂಗಡಿ ಬೆಲೆ 60ರಿಂದ 70ರೂಪಾಯಿ!  ಗಾತ್ರದಲ್ಲಿ ಚಿಕ್ಕದು ಹಾಗೂ ಕಡು ಹಸಿರು ಬಣ್ಣ ಹೊಂದಿರುವ `ಬೇಬಿ ಸ್ವೀಟ್~ ಎಂದೇ ಕರೆಯಲ್ಪಡುವ ಕಲ್ಲಂಗಡಿ ಹಣ್ಣು ಸ್ವಲ್ಪ ದುಬಾರಿಯೇ!

ಸಾಮಾನ್ಯ ದಿನಗಳಲ್ಲಿ ಬೆಂಗಳೂರು, ಹೈದರಾಬಾದ್‌ನಂಥ ಮಹಾನಗರಗಳಲ್ಲಿ ರಾರಾಜಿಸುವ ಈ ಕಲ್ಲಂಗಡಿ ಶಿವರಾತ್ರಿಗೂ ಮುನ್ನ ನಗರಕ್ಕೆ ಧಾವಿಸಿದೆ.

ಜಿಲ್ಲೆಯ ದೇವದುರ್ಗ ತಾಲ್ಲೂಕು, ಆಂಧ್ರಪ್ರದೇಶದ ಕೋಸಗಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿ, ಹೈದರಾಬಾದ್, ಬೆಂಗಳೂರಿನಿಂದ ಕಲ್ಲಂಗಡಿ ಹಣ್ಣುಗಳನ್ನು ನಗರದ ಹಣ್ಣು ಮಾರಾಟಗಾರರು ತಂದಿದ್ದಾರೆ.


ಮಳೆ ಇಲ್ಲ... ಮಾಲ್ ಇಲ್ಲ... ಬೆಲೆ ಜಾಸ್ತಿ: ಈ ವರ್ಷ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಹಿಂಗಾರಿ ಮಳೆ ಬಂದಿಲ್ಲ. ನೀರಾವರಿ ಪ್ರದೇಶದಲ್ಲಿ, ನದಿ ಪಕ್ಕದಲ್ಲಿ ಬೆಳೆದ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಧಾವಿಸಿದೆ. ಮಾರ್ಕೆಟ್‌ಗೆ ಮಾಲ್ ಕಡಿಮೆ ಬಂದಿದೆ. ಹೆಚ್ಚಿನ ಬೆಲೆ ಕೊಟ್ಟು ನಾವು ಖರೀದಿಸಿ ತಂದಿದ್ದೇವೆ. ಹೀಗಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯ ಎಂದು ಕಲ್ಲಂಗಡಿ ಹಣ್ಣು ಮಾರಾಟಗಾರರಾದ ಅನ್ವರ್ ಹಾಗೂ ಬಷೀರ್ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT