ADVERTISEMENT

ಶ್ರಮದಾನದಿಂದ ಸಹಬಾಳ್ವೆ ಜಾಗೃತಿ ಪಾಠ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:37 IST
Last Updated 4 ಡಿಸೆಂಬರ್ 2013, 8:37 IST

ಸಿಂಧನೂರು: ‘ಬೆಳೆಯುವ ಸಿರಿ ಮೊಳಕೆ’ ಯಲ್ಲಿ ಎಂಬ ನಾಣ್ನುಡಿಯನ್ನು ಸಿಂಧನೂರಿನ ಸಂಕೇತ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು ತಾಲ್ಲೂಕಿನ ಇ.ಜೆ.ಹೊಸಳ್ಳಿ ಕ್ಯಾಂಪ್‌ನಲ್ಲಿ ಹಮ್ಮಿಕೊಂಡಿರುವ ಎನ್ಎಸ್‌ಎಸ್‌ ವಿಶೇಷ ಶಿಬಿರದಲ್ಲಿ ಸಾಬೀತು ಮಾಡಿದ್ದಾರೆ.

ಗ್ರಾಮದಲ್ಲಿರುವ ಕೆರೆಯನ್ನು ಸ್ವಚ್ಛಗೊಳಿಸಿ ಶುದ್ಧನೀರಿನ ಸೌಲಭ್ಯ ಸಿಗುವಂತೆ ಶ್ರಮದಾನ ಮಾಡಿ ವಿದ್ಯಾರ್ಥಿಗಳು ಶ್ರಮಿಸಿದ್ದಾರೆ. ಮುಖ್ಯರಸ್ತೆ, ಶಾಲಾವರಣ ಸ್ವಚ್ಛಗೊಳಿಸಿದ್ದಾರೆ. ಕಾಲುವೆ ಎರಡೂ ಬದಿಯಲ್ಲಿ ಬೆಳೆದಿದ್ದ ಮುಳ್ಳು ಕಂಟಿ ಕಡಿದು ಸರಾಗವಾಗಿ ನೀರು ಹರಿಯುವಂತೆ ಮಾಡಿರುವ ವಿದ್ಯಾರ್ಥಿಗಳ ಶ್ರಮವನ್ನು ಗಮನಿಸಿದ ಗ್ರಾಮಸ್ಥರು ತಾವೂ ಸ್ವ– ಇಚ್ಛೆಯಿಂದ ಶ್ರಮದಾನದಲ್ಲಿ ತೊಡಗಿಕೊಂಡಿದ್ದಾರೆ. ವಿಶಿಷ್ಟ ರೀತಿಯ ಶ್ರಮದಾನದ ಮೂಲಕ ಗ್ರಾಮದ ಜನರಲ್ಲಿ ಸಹಬಾಳ್ವೆ ಪಾಠ ಮಾಡಿದ್ದಾರೆ.

ಗ್ರಾಮದ ಮನೆ–ಮನೆಗಳಿಗೆ ತೆರಳಿ ಆರೋಗ್ಯ ಜಾಗೃತಿ, ಸಾಕ್ಷರತೆ, ಮಹಿಳಾ ಸಬಲೀಕರಣ ಮತ್ತಿತರ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿವಳಿಕೆ ಮೂಡಿಸಿದ್ದಾರೆ.  ಸಂಕೇತ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮಕ್ಕೆ ಬಂದು ಹಲವಾರು ವಿಷಯಗಳ ಕುರಿತು ಮಾಹಿತಿ ತಿಳಿವಳಿಕೆ ನೀಡಿ ಕಣ್ಣು ತೆರೆಸಿದ್ದಾರೆ ಎನ್ನುತ್ತಾರೆ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಯಮನಪ್ಪ.

ನಗರ ಪ್ರದೇಶದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪ್ಯಾಂಟ್‌ ಹಾಕಿಕೊಂಡು ಶೋಕಿ ಮಾಡುವುದಕ್ಕೆ ಹೋಗುತ್ತಾರೆ ಎಂದು ಗೇಲಿ ಮಾಡುತ್ತವೆ. ಹುಡಗ್ರೂ ಏನು ಕೆಲಸಾ ಮಾಡ್ಯಾರ್‌ ಎಂದು ನಾವೇ ಹಾಸ್ಯ ಮಾಡೆವಿ. ಗ್ರಾಮಕ್ಕೆ ಬಂದು ಚರಂಡಿ ಸ್ವಚ್ಛ ಮಾಡಿರುವ ರೀತಿ ಗಮನಿಸಿದರೆ ಹಿಂದೆ ಮಹಾತ್ಮ ಗಾಂಧೀಜಿ ಕನಸು ಕಂಡ ಗ್ರಾಮಸ್ವರಾಜ್ಯ ಕಲ್ಪನೆ ಮಾತು ನೆನಪಿಗೆ ಬಂತು ಎಂದು ಬಸಯ್ಯ ಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಐದಾರು ದಿನಗಳಿಂದ ಶ್ರಮದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸಿರುವ ವಿದ್ಯಾರ್ಥಿಗಳಾದ ಮೌನೇಶ, ಮಹೇಂದ್ರ, ಕೌಶಿಕ್, ಅಕ್ಷತಾ, ಅಮರಮ್ಮ, ಸುಮಲತಾ ಅವರು, ಪ್ರಾಚಾರ್ಯ ಶ್ರೀಧರ ಕುಲಕರ್ಣಿ, ಎನ್ಎಸ್‌ಎಸ್‌ ಅಧಿಕಾರಿ ರಿಯಾಜ್‌ಪಾಷ ಅವರ ಪ್ರೋತ್ಸಾಹವೇ ಸಮಾಜ ಸೇವೆಗೆ ಅಣಿಯಾಗಲು ಪ್ರೇರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದಿನಾಲು ಸಂಜೆ ಕ್ಯಾಂಪ್‌ ಜನರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು, ಈ ಕಾರ್ಯ ನಮಗೆ ತುಂಬಾ ಸಂತಸ ತಂದಿದೆ ಎಂದು ದೇವೇಂದ್ರ, ಅಮರೇಶ, ಮಂಜುನಾಥ, ನಾಗರತ್ನ, ಜ್ಯೋತಿ ಮತ್ತು ದೀಪಾ ಮನದಾಳದ ಮಾತು ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಜಾಗೃತಿ ಬಿತ್ತಿದರು
ಪ್ರತಿನಿತ್ಯ ಸಂಜೆ ಗ್ರಾಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕ್ಯಾಂಪ್‌ನಲ್ಲಿರುವ ಜನರ ಹಲವು ಸಂಕಷ್ಟಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸೇವೆಯನ್ನು ಎಂದು ಮರೆಯಲ್ಲ. ಮುಂದಿನ ವರ್ಷವೂ ನಮ್ಮೂರಿಗೆ ಬರುವಂತೆ ಸಂಕೇತ ಕಾಲೇಜಿನ ಅಧ್ಯಕ್ಷ ಎಸ್.ಬಸವರಾಜ ಅವರಲ್ಲಿ ಮನವಿ ಮಾಡುತ್ತೆವೆ.
ಹನುಮಂತ ಗವಿಮನಿ, ಗ್ರಾಮಸ್ಥ

ಪ್ರೀತಿ ಎಂದು ಮರೆಯಲಾಗದು

ಹಲವಾರು ವರ್ಷಗಳಿಂದ ಎನ್‌ಎಸ್‌ಎಸ್‌ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಈ ವರ್ಷ ವಿಶೇಷ ಅನುಭವ ನೀಡಿದೆ. ನ್ಯಾಯಾಧೀಶರೂ ಸೇರಿದಂತೆ ಗ್ರಾಮದ ಸಾಮಾನ್ಯ ವ್ಯಕ್ತಿಗಳೂ ಪ್ರೋತ್ಸಾಹಿಸಿದ್ದಾರೆ. ಅವರ ಪ್ರೀತಿ, ವಿಶ್ವಾಸವನ್ನು ಎಂದು ಮರೆಯಲಾಗದು.
ರಿಯಾಜ್‌ ಪಾಷ,  ಎನ್ಎಸ್‌ಎಸ್‌ ಅಧಿಕಾರಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.