ADVERTISEMENT

ಸಮಸ್ಯೆಗಳ ಆಗರ ಜಾಲಿಬೆಂಚಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ನವೆಂಬರ್ 2017, 5:58 IST
Last Updated 28 ನವೆಂಬರ್ 2017, 5:58 IST
ಲಿಂಗಸುಗೂರು ತಾಲ್ಲೂಕು ಜಾಲಿಬೆಂಚಿ ಗ್ರಾಮದಲ್ಲಿ ಉದ್ಘಾಟನೆಗೆ ಕಾಯುತ್ತಿರುವ ನೀರು ಸಂಗ್ರಹಣ ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ
ಲಿಂಗಸುಗೂರು ತಾಲ್ಲೂಕು ಜಾಲಿಬೆಂಚಿ ಗ್ರಾಮದಲ್ಲಿ ಉದ್ಘಾಟನೆಗೆ ಕಾಯುತ್ತಿರುವ ನೀರು ಸಂಗ್ರಹಣ ತೊಟ್ಟಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ   

ಲಿಂಗಸುಗೂರು: ಹದಗೆಟ್ಟ ಸಂಪರ್ಕ ರಸ್ತೆ, ಉದ್ಘಾಟನೆಗೆ ಕಾಯುತ್ತಿರುವ ನೀರಿನ ಟ್ಯಾಂಕ್‌, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು ಇದು ಜಾಲಿಬೆಂಚಿ ಗ್ರಾಮದ ಸ್ಥಿತಿ.

ತಾಲ್ಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳದಿಂದ 2 ಕಿ.ಮೀ. ಮತ್ತು ತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ಅಂತರದಲ್ಲಿರುವ ಜಾಲಿಬೆಂಚಿ ಗ್ರಾಮದಲ್ಲಿ 175 ಮನೆಗಳಿವೆ. ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಸರ್ಕಾರದಿಂದ ಸಂಪರ್ಕ ರಸ್ತೆ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಭಾಗಶಃ ಸಿಸಿ ರಸ್ತೆ ಬಿಟ್ಟರೆ ಉಳಿದ ಮೂಲಸೌಕರ್ಯಗಳು ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

’ಸರ್ಕಾರದ ನೂರಾರು ಯೋಜನೆಗಳು ಗ್ರಾಮಸ್ಥರಿಗೆ ಸಿಗದೆ ಹೋದರು ಪರವಾಗಿಲ್ಲ, ಶುದ್ಧ ಹಾಗೂ ಸಮರ್ಪಕ ಕುಡಿವ ನೀರು ದೊರಕುತ್ತಿಲ್ಲ. ಅಡುಗೆಗೆ ಕಲುಷಿತ ನೀರನ್ನು ಅನಿವಾರ್ಯವಾಗಿ ಬಳಕೆ ಮಾಡುತ್ತಿದ್ದೇವೆ’ ಎಂದು ರಾಮಣ್ಣ ದೂರಿದರು.

ADVERTISEMENT

‘ಕಾಂಕ್ರಿಟ್‌ ರಸ್ತೆಗಳಲ್ಲಿ, ವ್ಯವಸ್ಥಿತ ಚರಂಡಿಗಳ ನಿರ್ಮಾಣ ಮಾಡಿಲ್ಲ. ಬೆರಳೆಣಿಕೆಯಷ್ಟು ವೈಯಕ್ತಿಕ ಶೌಚಾಲಯ ಕಾಣಸಿಗುತ್ತವೆ. ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರ ಮನೆ ಬಾಗಿಲಿಗೆ ತಲುಪಿಸಿ ಜಾಗೃತಿ ಮೂಡಿಸುವ ಕಾರ್ಯಗಳು ಈ ಗ್ರಾಮದಲ್ಲಿ ನಡೆದಿಲ್ಲ. ಸರ್ಕಾರದ ಯೋಜನೆಗಳಿಗೆ ಹಾಗೂ ತಮಗೆ ಸಂಬಂಧವೇ ಇಲ್ಲ ಎಂಬಂತೆ ಬದುಕು ಕಟ್ಟಿಕೊಂಡಿದ್ದಾರೆ’ ಎನ್ನುತ್ತಾರೆ ಹನುಮಂತಪ್ಪ.

ಗ್ರಾಮದ ಆರು ಸ್ಥಳಗಳಲ್ಲಿ ಸಿಸ್ಟರ್ನ್‌ ಅಳವಡಿಸಲಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ಮೇಲೆತ್ತರದ ನೀರು ಸಂಗ್ರಹಣಾ ತೊಟ್ಟಿ ನಿರ್ಮಿಸಿದ್ದರೂ ಅವುಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯುತ್ತಿಲ್ಲ. ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದ್ದರಿಂದ ಐದನಾಳ, ಕರಡಕಲ್ಲ, ಮಿಂಚೇರಿಗೆ ಗ್ರಾಮದ ಪಡಿತರದಾರರನ್ನು ಹಂಚಿಕೆ ಮಾಡಲಾಗಿದ್ದು, ಪಡಿತರ ಧಾನ್ಯವನ್ನು ಪಡೆಯಲು ಪರದಾಡುವಂತಾಗಿದೆ ಎಂದು ದುರುಗಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಗೊಳ್ಳದಿರುವುದು ದುರದೃಷ್ಟಕರ. ಕೂಲಿಕಾರ ಜನತೆ ಉದ್ಯೋಗ ಸಿಗದೆ ಬೇರೆ ಗ್ರಾಮಗಳತ್ತ ಮುಖ ಮಾಡಿದ್ದಾರೆ. ಸಂಕಷ್ಟ ದಲ್ಲಿರುವ ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಶಿವಕುಮಾರ, ಅಮರಪ್ಪ ಒತ್ತಾಯಿಸಿದರು.

* * 

ಅತ್ಯಂತ ಹಿಂದುಳಿದ ಜನಾಂಗ ವಾಸಿಸುತ್ತಿರುವ ಜಾಲಿಬೆಂಚಿ ಗ್ರಾಮಕ್ಕೆ ಅಗತ್ಯ ಸೌಲಭ್ಯ ಜತೆ ಸ್ಮಶಾನ ಮಂಜೂರಾತಿ ಆಗಬೇಕು
ಗಿರಿಮಲ್ಲನಗೌಡ ಕರಡಕಲ್ಲ
ಜೆಡಿಎಸ್‌ ರಾಜ್ಯ ಕಾರ್ಯದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.