ADVERTISEMENT

ಸಮಾಜ ಏಳಿಗೆಗೆ ಬೆಳಕು ಚೆಲ್ಲುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 13:05 IST
Last Updated 18 ಜನವರಿ 2011, 13:05 IST

ರಾಯಚೂರು: ಈ ಭಾಗದ ಉತ್ತಮ ಮತ್ತು ಪ್ರತಿಭಾನ್ವಿತ ಬರಹಗಾರರಾದ ಡಾ ಅಮರೇಶ ನುಗಡೋಣಿ ಅವರು ಬರೆದ ಕಥೆಯನ್ನಾಧರಿಸಿ ಕನಸೆಂಬೋ ಕುದರೆಯನೇರಿ ಚಲನಚಿತ್ರ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ಸಮಾಜ ಬದಲಾವಣೆಗೆ ಸಹಕಾರಿಯಾಗುವಂಥ ಹೊಸ ರೀತಿಯ ಚಿಂತನೆಯ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದಂತಾಗಿದೆ ಎಂದು ಮಾಜಿ ಶಾಸಕ ಎನ್.ಎಸ್ ಬೋಸರಾಜ ಹೇಳಿದರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗ್ರಾಮ ವಿಕಾಸ-ಯುನಿಸೆಫ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ. ಅಮರೇಶ ನುಗಡೋಣಿ ಅವರು ಬರೆದ ಸವಾರಿ ಕಥೆ ಆಧರಿಸಿ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ‘ಕನಸೆಂಬೋ ಕುದುರೆಯನೇರಿ’ ಚಲನಚಿತ್ರ ಪ್ರದರ್ಶನ- ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಿರೀಶ್ ಕಾಸರವಳ್ಳಿ ಅವರಂಥ ಶ್ರೇಷ್ಠ ನಿರ್ದೇ ಶಕರು ಸವಾರಿ ಕಥೆ ಆಯ್ದುಕೊಂಡು ಚಿತ್ರ ನಿರ್ದೇಶಿಸಿರುವುದು ಮಹತ್ವದ ಸಂಗತಿ ಎಂದರು.ಡಾ.ಅಮರೇಶ ನುಗಡೋಣಿ ಅವರು ಸವಾರಿ ಕಥೆಯಲ್ಲಿ ಅನುಸರಿಸಿದ ನಿರೂಪಣಾ ಶೈಲಿ ವಿಶಿಷ್ಟ ಮತ್ತು ಹೊಸ ರೀತಿಯ ಚಿಂತನಾ ಕ್ರಮವಾಗಿದೆ. ಅದೇ ಶೈಲಿಯನ್ನು ಸಿನಿಮಾದಲ್ಲೂ ಪರಿಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಚಿತ್ರಕ್ಕೆ ಪ್ರಶಸ್ತಿ  ಬಂದಿದೆ. ಜಗತ್ತಿನ 12 ದೇಶಗಳಲ್ಲಿ ಈ ಚಿತ್ರ ಪ್ರದರ್ಶನ ಗೊಂಡಿದೆ ಎಂದು ಕನಸೆಂಬೋ ಕುದುರೆಯನೇರಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು. ಜಿಲ್ಲಾ ಕಸಾಪ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಭೀಮನಗೌಡ ಇಟಗಿ, ಗೌರವ ಕಾರ್ಯ ದರ್ಶಿಗಳಾದ ಭೀಮನಗೌಡ ಇಟಗಿ, ಎಚ್.ಎಚ್ ಮ್ಯಾದಾರ, ಕೋಶಾಧ್ಯಕ್ಷ ಜಿ ಸುರೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.