ADVERTISEMENT

ಸರ್ಕಾರದ ಸಾಧನೆ ಜನರಿಗೆ ತಲುಪಿಸಿ: ಪ್ರತಾಪಗೌಡ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 9:15 IST
Last Updated 29 ಅಕ್ಟೋಬರ್ 2017, 9:15 IST

ಮಸ್ಕಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ 2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಮಾರಲದಿನ್ನಿ ಗ್ರಾಮದಲ್ಲಿ ಶುಕ್ರವಾರ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ಅನ್ನಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ, ರೈತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಹೆಚ್ಚಿನ ಅನುದಾನ ನೀಡಿದೆ’ ಎಂದರು.

‘ಬಿಜೆಪಿ ಮುಖಂಡರಿಗೆ ಟೀಕಿಸಲು ಯಾವುದೇ ವಿಷಯಗಳು ಇಲ್ಲದ ಕಾರಣ ವ್ಯಯಕ್ತಿಕ ತೇಜೋವಧೆಗೆ ನಿಂತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರೆ ಅವರಿಗೆ ತಕ್ಕ ಪಾಠ ಕಲಿಸುವರು. ಮಸ್ಕಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಕುಡಿವ ನೀರು, ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

ಕೆಪಿಸಿಸಿ ಸದಸ್ಯ ಅಂದಾನಪ್ಪ ಗುಂಡಳ್ಳಿ, ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಬಸವಂತರಾಯ ಕುರಿ, ಡಾ. ಬಿ.ಎಚ್. ದಿವಟರ್‌, ಪ್ರಸನ್ನ ಪಾಟೀಲ, ಯಲ್ಲೋಜಿರಾವ್‌ ಕೊರೆಕಾರ, ಬಸನಗೌಡ ಪೊಲೀಸ್‌ ಪಾಟೀಲ. ಎಪಿಎಂಸಿ ಉಪಾಧ್ಯಕ್ಷ ಬಸ್ಸಪ್ಪ ಬ್ಯಾಳಿ, ಈಶಾನ್ಯ ಸಾರಿಗೆ ಸಂಸ್ಥೆಯ ನಿರ್ದೇಶಕ ಶಿವುಕುಮಾರ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವುಕುಮಾರ ಬುದ್ದಿನ್ನಿ, ಅಮರೇಶ ಅಡವಿಭಾವಿ ಇತರ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.