ADVERTISEMENT

ಸಾಹಿತ್ಯ ಮನಸ್ಸುಗಳನ್ನು ಸಂಸ್ಕಾರಗೊಳಿಸುವ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:20 IST
Last Updated 5 ಮೇ 2012, 5:20 IST

ಲಿಂಗಸುಗೂರ: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ವರ್ಷಗಳಿಂದ ಚುನಾವಣೆ ಜರುಗಿರಲಿಲ್ಲ. ಆದರೆ, ಪ್ರಸಕ್ತ ಅವಧಿಗೆ ಚುನಾವಣೆ ನಡೆದು, ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಗೊಳಿಸಿದ ಸಾಹಿತ್ಯಾಸಕ್ತರ ಪ್ರೀತಿ ಸ್ಮರಣೀಯ. ಪ್ರತಿಸ್ಪರ್ದಿಗಳ ಬಗ್ಗೆ ಭಿನ್ನ ನುಡಿಗಳು ಸಲ್ಲದು. ಸಾಹಿತ್ಯ ಅನ್ನೋದು ಮನಸ್ಸುಗಳನ್ನು ಸಂಸ್ಕಾರಗೊಳಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹಾಂತೇಶ ಮಸ್ಕಿ ಅಭಿಮತ ವ್ಯಕ್ತಪಡಿಸಿದರು.

ಗುರುವಾರ ರಾತ್ರಿ ಸಾಹಿತ್ಯಾಸಕ್ತರು ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೋಲು ಗೆಲವುಗಳನ್ನು ಸಮಾನವಾಗಿ ಸ್ವಿಕರಿಸೋಣ. ತಮ್ಮ ಸೇವಾ ಅವಧಿಯಲ್ಲಿ ಸಾಹಿತ್ಯ ಪ್ರೇಮಿಗಳು ಒಪ್ಪುವ ಕಾರ್ಯಕ್ರಮಗಳನ್ನು ರೂಪಿಸುವ ಕನಸು ಕಂಡಿರುವೆ. ಕೇವಲ ಸಮ್ಮೇಳನ ಮಾಡುವುದರಿಂದ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ. ಸಾಹಿತಿಗಳನ್ನು ಒಗ್ಗೂಡಿಸಿ ಕ್ರಾಂತಿಕಾರಿ ಬದಲಾವಣೆಗೆ ಚಿಂತನೆಗಳು ನಡೆದಿವೆ. ಜಿಲ್ಲೆಯ ಐದು ತಾಲ್ಲೂಕಿನಿಂದ ತಲಾ 20 ಸಾಹಿತ್ಯಾಸಕ್ತರಿಂದ ರೂ. 10ಸಾವಿರದಂತೆ ಸಂಗ್ರಹಿಸುವ ಗುರಿ ಹೊಂದಿರುವೆ. ತಮ್ಮೆಲ್ಲರ ಸಹಾಯ, ಸಹಕಾರ ಇರಲಿ ಎಂದು ಭಿನ್ನವಿಸಿಕೊಂಡರು.

ರಾಜಕೀಯ ಮುತ್ಸದ್ದಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮಹಾಂತೇಶ ಮಸ್ಕಿ ಅವರನ್ನು ಇದೇ ಸಂದರ್ಭದಲ್ಲಿ ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು. ಹಿರಿಯ ಸಾಹಿತಿ ಗಿರಿರಾಜ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ವಿ.ಎನ್. ಅಕ್ಕಿ, ಎಸ್. ಶರಣೆಗೌಡ, ದೇವೇಂದ್ರಗೌಡ ಸಿಂಧೆ, ರಂಗಣ್ಣ ಅಳ್ಳುಂಡಿ, ತಾಯಪ್ಪ ಹೊಸೂರು, ಮಂಜುನಾಥ ಕಾಮಿನ್ ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.