ADVERTISEMENT

ಸಿರವಾರ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 9:20 IST
Last Updated 13 ಮೇ 2018, 9:20 IST

ಸಿರವಾರ: ವಿಧಾನಸಭೆ ಚುನಾವಣೆಗಾಗಿ ಶನಿವಾರ ನಡೆದ ಮತದಾನವು ಶಾಂತಿಯುತವಾಗಿ ನಡೆದಿದೆ.
ಪಟ್ಟಣ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಬಿರುಸಿನಿಂದ ಪ್ರಾರಂಭವಾಗಿ ಬಿಸಿಲಿನ ತಾಪಮಾನದಿಂದ ಮಧ್ಯಾಹ್ನದ ವೇಳೆಗೆ ನೀರಸವಾದರೂ ನಂತರ ಸಂಜೆ ವೇಳೆಗೆ ಮತ್ತೆ ಮತಗಟ್ಟೆಯತ್ತ ಮತದಾರರೂ ಮುಖ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಜಿ.ಹಂಪಯ್ಯ ನಾಯಕ ಅವರು ಸ್ವಗ್ರಾಮ ಬಲ್ಲಟಗಿಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಕೆ.ಶರಣಯ್ಯ ನಾಯಕ ಕೆ.ಗುಡದಿನ್ನಿ ಅವರು ಗುಡದಿನ್ನಿ ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕ ಚಲಾಯಿಸಿದರು. ಎಂ.ಇ.ಪಿ. ಪಕ್ಷದ ಅಭ್ಯರ್ಥಿ ಕೃಷ್ಣ ನಾಯಕ ಅವರು ಪಟ್ಟಣದ ವಿದ್ಯಾನಗರ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಜಕ್ಕಲದಿನ್ನಿಯಲ್ಲಿ ಗ್ರಾಮದಲ್ಲಿ ಸಿಬ್ಬಂದಿಗಳಿಗೆ ವಿವಿಪ್ಯಾಟ್‍ನ ಅಗತ್ಯ ಮಾಹಿತಿ ಕೊರತೆಯಿಂದ ಕೆಲಕಾಲ ಗೊಂದಲ ಉಂಟಾದ ಕಾರಣ ಸ್ಥಳಕ್ಕೆ ಮೇಲಾಧಿಕಾರಿಗಳ ಭೇಟಿ ನಂತರ ಸಮರ್ಪಕ ಮಾಹಿತಿಯ ಪಡೆದು ಒಂದು ಗಂಟೆ ತಡವಾಗಿ ಮತದಾನ ಪ್ರಾರಂಭಿಸಲಾಯಿತು.

ADVERTISEMENT

ಮತಗಟ್ಟೆ ಸ್ಥಳಾಂತರ ಮತದಾನಕ್ಕೆ ಪರದಾಟ: ಪಟ್ಟಣದ 11 ವಾರ್ಡ್‌ ಮುಚ್ಚಳಗುಡ್ಡ ಕ್ಯಾಂಪಿನ ಮತಗಟ್ಟೆಯು ಪ್ರತಿಬಾರಿ ಕ್ಯಾಂಪಿನ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗುತ್ತಿತ್ತು ಆದರೆ ಈ ಚುನಾವಣೆಯಲ್ಲಿ ಏಕಾಏಕಿ ಮತಗಟ್ಟೆಯನ್ನು ಪಟ್ಟಣ ನೀರಾವರಿ ಇಲಾಖೆಯ ಕೊಠಡಿಗೆ ವರ್ಗಾಯಿಸಿದ್ದರಿಂದ ಕ್ಯಾಂಪಿನ ಜನರು ಮತದಾನಕ್ಕಾಗಿ 2 ಕಿ.ಮೀ. ದೂರ ಕ್ರಮಿಸಲು ಪರದಾಡುವಂತಾಯಿತು.

ಸಮೀಪದ ಹೀರಾ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಬುದ್ದಿನ್ನಿ ಗ್ರಾಮದಲ್ಲಿ ಮತಗಟ್ಟೆ ಇಲ್ಲದಿರುವುದರಿಂದ 2 ಕಿ.ಮೀ ದೂರದ ಚಿಂಚಿರಕಿ ಗ್ರಾಮಕ್ಕೆ ತೆರಳಿ ಮತ ಚಲಾವಣೆ ಮಾಡುವ ಅನಿವಾರ್ಯತೆ ಎದುರಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.