ರಾಯಚೂರು: ಕಾನೂನು ಬಾಹಿರ ಹಾಗೂ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿರುವ ನಗರಸಭೆ ಪೌರಾಯುಕ್ತರ ತಿಪ್ಪೇಶ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ ಅವರು ಒತ್ತಾಯಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕಾನೂನಿನ ಚೌಕಟ್ಟಿನಲ್ಲಿ 2011 ಫೆಬ್ರುವರಿ ತಿಂಗಳಲ್ಲಿ ಸ್ಥಾಯಿ ಸಮಿತಿಯು ರಚನೆಗೊಂಡಿತು. ಸಮಿತಿಯು ತನ್ನ ಕಾರ್ಯಕಲಾಪಗಳನ್ನು ನಿರ್ವಹಿಸಲು ಬದ್ಧವಾಗಿರುತ್ತದೆ.
ಆದರೆ, ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಪರಿಗಣಿಸದೇ ಸರ್ವಾಧಿಕಾರ ಧೋರಣೆಯಿಂದ ನಗರಸಭೆಯ ಹಣವನ್ನು ದುರುಪಯೋಗ ಮಾಡಿದ್ದು, ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಪಾದಿಸಿದ್ದಾರೆ.
ಸಮಿತಿ ರಚನೆಗೊಂಡ ನಂತರ ಕಾನೂನಿನ ಪ್ರಕಾರ ಕನಿಷ್ಠ 15ದಿನಗಳವರೆಗೆ ಒಂದು ಬಾರಿ ಹಾಗೂ ಅವಶ್ಯಕತೆಗಳ ಅನುಸಾರವಾಗಿ ಸಭೆ ಕರೆಯುವ ನಿಯಮ ಇದೆ. ಸಮಿತಿ ರಚನೆಗೊಂಡ ಮೇಲೆ ಒಂದು ಸಭೆಯನ್ನು ಮಾತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಥಾಯಿ ಸಮಿತಿ ಸಭೆ ಕರೆಯದೇ ತಮ್ಮಿಷ್ಟಕ್ಕೆ ಬಂದಂತೆ ಖರ್ಚು ವೆಚ್ಚಗಳನ್ನು ಪಾವತಿಸಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಲ್ಲದೇ ತಮ್ಮ ದುರಾಡಳಿತವನ್ನೂ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೌರಾಯುಕ್ತರ ವಿರುದ್ಧ ಕ್ರಮ ಜರುಗಿಸಬೇಕು, ಸ್ಥಾಯಿ ಸಮಿತಿಯ ಕಾರ್ಯನಿರ್ವಹಣೆಯ ಬಗ್ಗೆ ನಗರಸಭೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು, ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಜಿಲ್ಲಾಧ್ಯಕ್ಷ ಶೇಖ ರಿಜ್ವಾನ್, ಜಿಲ್ಲಾ ವಕ್ತಾರ ಎಂ.ವಿರೂಪಾಕ್ಷಿ, ನಗರಸಭೆ ಸದಸ್ಯ ಎಂ.ಪವನಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ ವಕೀಲ, ರಾಯಕುಂಪಿ ಕೃಷ್ಣಮೂರ್ತಿ, ಶಂಶಾಲಂ, ಅಮ್ಜದ್, ಅಶೋಕ, ಬಿ.ಪಿ ಬಳಿಗಾರ, ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.