ADVERTISEMENT

`ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ'

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:14 IST
Last Updated 19 ಜುಲೈ 2013, 9:14 IST

ಸಿಂಧನೂರು: ಕೃಷಿ ವಲಯದ ಅಭಿವೃದ್ಧಿಗೆ ತಜ್ಞ ಎಂ.ಎಸ್.ಸ್ವಾಮಿನಾಥನ್ ನೀಡಿರುವ ವರದಿ ಜಾರಿಗೆಗೊಳಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಗುರುವಾರ ನಗರಸಭೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 15ನೇ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಏಳು ವರ್ಷಗಳ ಹಿಂದೆಯೇ ಸ್ವಾಮಿನಾಥನ್ ಆಯೋಗ ನೀಡಿರುವ ವರದಿಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ.  ಈ ನಡುವೆ ರೈತರು ಸಾಲದ ಸಂಕೋಲೆಯಲ್ಲಿ  ಸಿಕ್ಕು ನರಳುತ್ತಿದ್ದಾರೆ.

ರಾಜ್ಯದಲ್ಲಿ 76ಲಕ್ಷ ಜನ ರೈತರಿದ್ದಾರೆ. 50ಸಾವಿರ ಜನಕ್ಕೆ ಬ್ಯಾಂಕ್ ಸಾಲವೇ ದೊರೆತಿಲ್ಲ. ಅವರ ಹೆಸರಿನಲ್ಲಿ ಉದ್ಯಮಿಗಳು,ಬಂಡವಾಳಗಾರರು ಲಪಟಾಯಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದೇಶಿ ಬಂಡವಾಳಿಗರನ್ನು ರಾಜ್ಯಕ್ಕೆ ಕರೆತರುವ ಎಲ್ಲ ಯತ್ನ ನಡೆಸಿವೆ. ರೈತರು ಮಾರುಕಟ್ಟೆಯಲ್ಲಿ ಉತ್ಪನ್ನವನ್ನು ಕಡಿಮೆ ಬೆಲೆಗೆ ಮಾರಿ, ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಹಣಕ್ಕೆ ಕೊಂಡುಕೊಳ್ಳುವ ವಿಷಮ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಜಿ.ಸಿ.ಭಯ್ಯಾರೆಡ್ಡಿ ಮಾತನಾಡಿ, ಸಬ್ಸಿಡಿ, ನೀರಾವರಿ, ಮಾರುಕಟ್ಟೆ ಮೂಲಕ ಕೃಷಿಯನ್ನು ಮತ್ತಷ್ಟು ಉತ್ತೇಜನಗೊಳಿಸಬೇಕಾದ ಸರ್ಕಾರಗಳು ಅಡ್ಡದಾರಿ ಹಿಡಿಯುತ್ತಿವೆ. ದಿನಗಳದಂತೆ ಕೃಷಿ ವಲಯವನ್ನು ಖಾಸಗೀಕರಣಗೊಳಿಸಲು ಎಲ್ಲ ರೀತಿಯ ತಯಾರಿ ನಡೆಸುತ್ತಿವೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದ್ವಂದ್ವ ನಿಲುವಿನಿಂದ ಕೂಡಿದ್ದು, ರೈತರ ಹಿತವನ್ನು ಸಂಪೂರ್ಣ ನಿರ್ಲಕ್ಷಿಸುವುದರಲ್ಲಿ ಅನುಮಾನವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠೆ ಹೈಕಮಾಂಡ್‌ಗಿದೆಯೇ ಹೊರತು ಜನರ ಮೇಲೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಜಿ.ಎನ್.ನಾಗರಾಜ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಭಿನ್ನವಾಗಿಯೇನು ಇಲ್ಲ. `ಹೃದಯದೊಳಗೆ ವಿಷ, ಹೊರಗೆ ಮಾತ್ರ ಡಬಲ್ ಕೋಟ್ ಸಿಹಿ' ತೋರಿಸುತ್ತಿದೆ ಎಂದು ಲೇವಡಿ ಮಾಡಿದರು. ಕೇರಳದ ಎಂ.ಎಲ್.ಎ. ಕೃಷ್ಣಪ್ರಸಾದ, ಉಪಾಧ್ಯಕ್ಷ ಯು.ಬಸವಂತರಾವ ಮಾತನಾಡಿದರು. ತಾಲ್ಲೂಕು ಅಧ್ಯಕ್ಷ ಎಚ್.ವಿ.ಗುಡಿ, ನರಸಿಂಹಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT