ADVERTISEMENT

19ರಿಂದ ಮಹಾಶಿವಜಯಂತಿ ಮಹೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 10:40 IST
Last Updated 17 ಫೆಬ್ರುವರಿ 2012, 10:40 IST

ರಾಯಚೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಒಬ್ಬನೇ ದೇವರು ವಿಶ್ವ ಒಂದೇ ಪರಿವಾರ ಎಂಬ ಸಂದೇಶ ಸಾರುವ ಉದ್ದೇಶದ ಹಿನ್ನೆಲೆಯಲ್ಲಿ ಇದೇ 19ರಿಂದ 21ರವರೆಗೆ  ಮಹಾಶಿವ ಜಯಂತಿಯ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿವಿಯ ಸಂಚಾಲಕಿ ಸ್ಮಿತಾ ಅವರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಈಗ ಅಮೃತ ಮಹೋತ್ಸವ ಆಚರಣೆ ಸಂಭ್ರಮದಲ್ಲಿದೆ.  75 ವರ್ಷಗಳಿಂದ ಅನವರತ ಸೇವೆಯನ್ನು ಸಲ್ಲಿಸುವುದರೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆ ಮಾಡಿದೆ. ಧರ್ಮ,ಭಾಷೆ, ಜನಾಂಗ ಮೀರಿ 140 ರಾಷ್ಟ್ರಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ ಎಂದರು.

ಬ್ರಹ್ಮಕುಮಾರಿ ಈಶ್ವರಿ ವಿವಿಯ ಸಾಧನೆಯನ್ನು ಗೌರವಿಸುವುದರೊಂದಿಗೆ  ವಿಶ್ವರಾಷ್ಟ್ರ ಸಂಸ್ಥೆಯ(ಯುಎನ್‌ಒ) ಮಾನ್ಯತೆ ದೊರಕಿದೆ ಎಂದು ಹೇಳಿದರು.

ಈ ಎಲ್ಲ ಹಿನ್ನೆಲೆಯಲ್ಲಿ ಈ ಬಾರಿ ಮಹಾಶಿವರಾತ್ರಿ ನಿಮಿತ್ತ ಒಬ್ಬನೇ ದೇವರು ವಿಶ್ವ ಒಂದೇ ಪರಿವಾರ ಎಂಬ ಸಂದೇಶ ಸಾರುವ ಯೋಜನೆ ರೂಪಿಸಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.


ರಾಯಚೂರಿನಲ್ಲಿ 19ರಂದು ಬೆಳಿಗ್ಗೆ 8ಗಂಟೆಗೆ ಶಾಂತಿ ಮಹೋತ್ಸವದ ಅಂಗವಾಗಿ ಶಾಂತಿಯಾತ್ರೆಯು ನಗರದ ಸರ್ವ ಸಮಾಜದವರ ಸಹಕಾರದಿಂದ ಸಕಲ ವಾದ್ಯಗಳೊಂದಿಗೆ ಮಹಾತ್ಮಗಾಂಧಿ ಕ್ರೀಡಾಂಗಣದಿಂದ ಆರಂಭಿಸಿ ನಗರದ ವಿವಿಧ ರಸ್ತೆಗಳ ಮೂಲಕ ರಂಗಮಂದಿರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
 

ಅಮೃತ ಮಹೋತ್ಸವ ನಿಮಿತ್ತ 20ರಂದು ಸಂಜೆ 5ಗಂಟೆಗೆ ಪಂಡಿತ ಸಿದ್ಧರಾಮ ರಂಗಮಂದಿರದಲ್ಲಿ ಭಾವೈಕ್ಯತಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಗದಗ-ವಿಜಾಪುರದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದಸ್ವಾಮಿ, ಮಂಗಳೂರಿನ ಮಹಮ್ಮದ್ ಅಕ್ಕುನ್ನಿ, ಬೆಂಗಳೂರಿನ ವಿಲ್ಬರ್ಟ್ ನಿರಂಜನ್ ಅವರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ADVERTISEMENT


21ರಂದು ಸಂಜೆ 6ಗಂಟೆಗೆ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆವರಣದಲ್ಲಿ ವಚನಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ನಗರಸಭೆ ಸದಸ್ಯ ಶಾಂತಪ್ಪ, ವಕೀಲರಾದ ದೇವಣ್ಣ ನಾಯಕ ಮತ್ತು ವೈ.ಶ್ರೀಕಾಂತ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.