ಸಿಂಧನೂರು (ರಾಯಚೂರು): ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ₹3 ಕೋಟಿ ಅವ್ಯವಹಾರ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಕೆಆರ್ಐಡಿಎಲ್ನ ಕಾರ್ಯಪಾಲಕ ಎಂಜಿನಿಯರ್ ಅನಿಲ್ ಕುಮಾರ್ ಗೋಖಲೆ ಅವರನ್ನು ವಜಾಗೊಳಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಆದೇಶಿಸಿದ್ದಾರೆ.
2021–22ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ನಗರದ 40ನೇ ವಿತರಣಾ ಕಾಲುವೆಗೆ ಹೊಂದಿಕೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಸುಳ್ಳು ದಾಖಲೆ ಸಲ್ಲಿಸಿ ₹3 ಕೋಟಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಅನಿಲ್ ಕುಮಾರ ಗೋಖಲೆ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಅಮಾನತು ಆದೇಶ ತೆರವುಗೊಳಿಸಿ ಇಲಾಖೆಯಿಂದ ತನಿಖೆ ನಡೆಸಲಾಗಿತ್ತು. ಅವ್ಯವಹಾರ ನಡೆಸಿದ್ದು ತನಿಖೆಯಲ್ಲಿ ಸಾಬೀತಾಗಿದೆ.
ಗೋಖಲೆಯವರ ವಜಾದಿಂದ ಬರುವ ಗ್ರಾಜ್ಯುಟಿ, ಗಳಿಕೆ ರಜೆ ನಗದೀಕರಣ ಮೊತ್ತ ಹಾಗೂ ಉಳಿದ ಹಣವನ್ನು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ ವಸೂಲಿ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.