ADVERTISEMENT

‘ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಿ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 6:52 IST
Last Updated 14 ಜನವರಿ 2018, 6:52 IST

ರಾಯಚೂರು: ‘ಸಂಚಾರ ನಿಮಯಗಳನ್ನು ಪ್ರತಿಯೊಬ್ಬರು ಚಾಚು ತಪ್ಪದೇ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ಶನಿವಾರ ಆಯೋಜಿಸಿದ್ದ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ಜೀವನ ಅಮೂಲ್ಯವಾದುದು, ರಸ್ತೆ ಸುರಕ್ಷತೆಗಾಗಿ ಅಳವಡಿಸಲಾಗಿರುವ ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಸಾಧ್ಯವಿದೆ. ಆದ್ದರಿಂದ ಸಂಚಾರಿ ನಿಯಮಗಳನ್ನು ಪಾಲಿಸಿ ದೀರ್ಘಾಯುಷಿಗಳಾಗಿ ಬಾಳಬೇಕು ಎಂದರು.

ಕಡಿದು ವಾಹನ ಚಲಾಯಿಸುವುದು ಅಥವಾ ಸಿಗ್ನಲ್ ಜಂಪ್‌ ಮಾಡುವುದನ್ನು ಮಾಡಬಾರದು. ಸೀಟ್‌ ಬೆಲ್ಟ್‌ ಹಾಕಿಕೊಳ್ಳುವುದು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವ ಮೂಲಕ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.

ADVERTISEMENT

ನಗರದ ರಾಜೇಂದ್ರ ಗಂಜ್‌ ವೃತ್ತದಿಂದ ಆರಂಭಗೊಂಡ ಮ್ಯಾರಾಥಾನ್ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಅವರು ಚಾಲನೆ ನೀಡಿದರು.
ಗಂಜ್ ವೃತ್ತದಿಂದ ಗೋಶಾಲ ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಂಚಾರ ಪೊಲೀಸ್‌ ಠಾಣೆವರೆಗೆ ಮ್ಯಾರಾಥಾನ್ ಓಟ ನಡೆಯಿತು. ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಲಾಯಿತು.

ಪ್ರಬಂಧ, ಚಿತ್ರಕಲೆ ಸ್ಪರ್ಧೆ:ನಗರದ ಟ್ಯಾಗೋರ್‌ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಕುರಿತು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮ್ಯಾರಾಥಾನ್‌ ಓಟದ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.

ಮಾರ್ಕೆಟ್‌ ಯಾರ್ಡ್‌ ಪಿಎಸ್‌ಐ ಎಲ್‌.ಬಿ.ಅಗ್ನಿ, ಸಂಚಾರ ಠಾಣೆ ಪಿಎಸ್‌ಐ ಸಿದ್ಧರಾಮೇಶ್ವರ ಗಡೇದ, ಜೆಸಿಐ ಅಧ್ಯಕ್ಷ ರಾಕೇಶ ರಾಜಲಬಂಡ, ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.