ದೇವದುರ್ಗ (ರಾಯಚೂರು ಜಿಲ್ಲೆ): ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಅರಕೇರಾ ತಾಲ್ಲೂಕಿನ ಭೋಗಿರಾಮನಗುಂಡ ಗ್ರಾಮದ ಬಾಣಂತಿ ಶಿವಮ್ಮ (29) ಮತ್ತು ಮಗು ಸೋಮವಾರ ಮೃತಪಟ್ಟಿದೆ.
ಗರ್ಭಿಣಿ ಶಿವಮ್ಮ ಅವರು ಪ್ರತಿ ತಿಂಗಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಕೊಳ್ಳುತ್ತಿದ್ದರು. ಹೆರಿಗೆಗಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ನೋವು ಹೆಚ್ಚಾದ ಕಾರಣ ಸ್ಟಾಫ್ ನರ್ಸ್ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತೀವ್ರ ರಕ್ತ ಸ್ರಾವವಾಗಿದೆ. ತಕ್ಷಣ ಸಿಬ್ಬಂದಿ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿವಮ್ಮ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ರಕ್ತಸಾವ್ರ ಹೆಚ್ಚಾದ ಕಾರಣ ಮಾರ್ಗಮಧ್ಯದಲ್ಲಿ ತಾಯಿ ಮತ್ತು ಮಗು ಮೃತಪಟ್ಟಿದೆ.
‘ಬಾಣಂತಿ ಸಾವಿಗೆ ದೇವದುರ್ಗದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ’ ಎಂದು ಮೃತರ ಸಹೋದರ ದುರುಗಪ್ಪ ಆರೋಪಿಸಿದ್ದಾರೆ.
‘ಶಿವಮ್ಮ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಆಗ ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ಆಂತರಿಕ ತನಿಖೆ ನಡೆಸಿದ್ದು, ಡಿಎಚ್ಒ ಅವರಿಗೆ ವರದಿ ನೀಡಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.