ADVERTISEMENT

‘ಏಮ್ಸ್‌ಗೆ ಸಂಘಟನಾತ್ಮಕ ಹೋರಾಟ ಅಗತ್ಯ’

ಸರ್ವ ಪಕ್ಷಗಳ ರಾಜಕೀಯ ನಾಯಕರ, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 2:37 IST
Last Updated 27 ಸೆಪ್ಟೆಂಬರ್ 2021, 2:37 IST
ರಾಯಚೂರಿನ ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನಲ್ಲಿ ನಡೆದ ‘ಏಮ್ಸ್ ಮಂಜೂರಿಗಾಗಿ ಸರ್ವ ಪಕ್ಷಗಳ ರಾಜಕೀಯ ನಾಯಕರ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ’ಯಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯಿಂದ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು
ರಾಯಚೂರಿನ ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನಲ್ಲಿ ನಡೆದ ‘ಏಮ್ಸ್ ಮಂಜೂರಿಗಾಗಿ ಸರ್ವ ಪಕ್ಷಗಳ ರಾಜಕೀಯ ನಾಯಕರ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ’ಯಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯಿಂದ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು   

ರಾಯಚೂರು: ‘ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ರಾಜ್ಯ ಸರ್ಕಾರ ಕ್ಯಾಬಿನೆಟ್ ಮೂಲಕ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ತಾರನಾಥ ಶಿಕ್ಷಣ ಸಂಸ್ಥೆಯ ಎಸ್ಎಸ್ಆರ್ ಜಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಏಮ್ಸ್ ಮಂಜೂರಿಗಾಗಿ ಹೋರಾಟದ ರೂಪರೇಷಗಳ ಚರ್ಚೆಗೆ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ’ಯಲ್ಲಿ ಅವರು ಮಾತನಾಡಿದರು.

ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಪಟ್ಟಿಯಲ್ಲಿದ್ದು, ಈ ಜಿಲ್ಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ADVERTISEMENT

ಏಮ್ಸ್ ಮಂಜೂರಿಗೆ ಪಕ್ಷಾತೀತ ಹಾಗೂ ಸಂಘಟನಾತ್ಮಕ ಹೋರಾಟ ಅಗತ್ಯ. ನೂತನ ಜಿಲ್ಲಾ ಉಸ್ತುವಾರಿ ಹಾಲಪ್ಪ ಅಚಾರ್ ಅವರಿಗೆ ಏಮ್ಸ್‌ಗೆ ಬೇಕಾಗುವ ಎಲ್ಲಾ ಸೌವಲತ್ತು ಒದಗಿಸುವಂತೆ ರಾಜ್ಯ ಸರ್ಕಾರದ
ಗಮನ ಸೆಳೆಯಲು ಪ್ರಯತ್ನ ಮಾಡಲಾಗುವುದು. ಈ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಯ ಹೆಸರು ಕಳಿಸಿದ್ದು ಮುಖ್ಯಮಂತ್ರಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಲಾಗುವುದು ಎಂದು ಅವರು ಹೇಳಿದರು.

ನಗರ ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಸಂಘ ಸಂಸ್ಥೆಗಳ ಸಹಭಾಗಿತ್ವ ಅಗತ್ಯವಾಗಿದೆ. ಆಡಳಿತರೂಢ ಶಾಸಕರು ಸರ್ಕಾರದ ವಿರುದ್ಧ ನಡೆದುಕೊಳ್ಳಲು ಆಗಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಿದ್ದಲ್ಲಿ ಪದ ತ್ಯಾಗಕ್ಕೂ ಸಿದ್ಧ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಕೆಕೆಆರ್‌ಡಿಬಿಯಿಂದ ₹ 49 ಕೋಟಿ ಅನುದಾನ ಬಿಡುಗಡೆಯಾಗಿದೆ. ಆಡಳಿತಾತ್ಮಕ ಅನುಮೋದನೆಯ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. 2 ತಿಂಗಳಿನೊಳಗೆ ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ ಕಾರ್ಯ ಮಾಡಲಾಗುವುದು ಎಂದರು.

ಸಭೆಯಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಎ. ಪಾಪಾರೆಡ್ಡಿ, ಹೋರಾಟಗಾರ ಬಸವರಾಜ ಕಳಸ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಮೈತ್ರಿಕರ್ ಮಾತನಾಡಿದರು.

ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ದೊಡ್ಡಮಲ್ಲೇಶಪ್ಪ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶರಣಬಸವ ಪಾಟೀಲ ಜೋಳದಹೆಡಗಿ, ವಿ.ಲಕ್ಷ್ಮಿರೆಡ್ಡಿ, ಎನ್.ಮಹಾವೀರ, ಕೆ.ಇ ಕುಮಾರ ಮತ್ತಿತರರು ಇದ್ದರು.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಏಮ್ಸ್ ಹೋರಾಟಕ್ಕೂ ಮುನ್ನ ವಿಮಾನ ನಿಲ್ದಾಣ ಆರಂಭ ಅಗತ್ಯವಾಗಿದೆ. ಏಮ್ಸ್ ಹೋರಾಟಕ್ಕೆ ಅಗತ್ಯ ಬೆಂಬಲ ನೀಡಿ ಯಾವುದೇ ಸಂದರ್ಭದಲ್ಲಿ ಕರೆದರೂ ಜೊತೆಯಲ್ಲಿರುತ್ತೇನೆ.
-ದದ್ದಲ್ ಬಸನಗೌಡ, ರಾಯಚೂರು ಗ್ರಾಮೀಣ ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.