ADVERTISEMENT

"ಸರ್ಕಾರಿ ಜಾಗ ಬಡವರಿಗೆ ಹಂಚಿಕೆ ಮಾಡಿ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 15:03 IST
Last Updated 12 ಆಗಸ್ಟ್ 2021, 15:03 IST
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರಿನಲ್ಲಿ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರಿನಲ್ಲಿ ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು   

ರಾಯಚೂರು: ತಾಲ್ಲೂಕಿನ ಸಿಂಗನೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಪೂರು ಗ್ರಾಮದ ಸರ್ಕಾರಿ ಜಾಮೀನು ಪ್ರಭಾವಿಗಳು ಒತ್ತುವರಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಬಾಪುರು ಗ್ರಾಮದ ಸರ್ವೆ ನಂಬರ್ 30ರ 5.8 ಎಕರೆ, ಸರ್ವೆ ನಂಬರ್ 48 ರ 17.28 ಎಕರೆ ಸರ್ವೆ ನಂಬರ್ 128ರ 7.35 ಹಾಗೂ ಸರ್ವೆ ನಂಬರ್ 47ರ 2 ಗುಂಟೆ ಜಮೀನು ಸರ್ಕಾರದ್ದಾಗಿದೆ. 1998–99 ನೇ ಸಾಲಿನಲ್ಲಿ ಸರ್ವೆ ನಂಬರ್ 30 ರ 2 ಎಕರೆ ಜಾಗವನ್ನು ಅಂದಿನ ಜಿಲ್ಲಾಧಿಕಾರಿ ರುದ್ರಭೂಮಿ ಮಂಜೂರಿಗೆ ಆದೇಶ ನೀಡಿದ್ದರು. ಆದರೆ ಇದು ಉಳಿದಿಲ್ಲ ಎಂದು ತಿಳಿಸಿದರು.

ಪೋತಲ ಗೋವಿಂದ ಎಂಬುವವರು ಜಾಗವನ್ನು ನಿವೇಶನವನ್ನಾಗಿ ಮಾಡಿ ಮಾರಾಟ ಮಾಡಿದ್ದಾರೆ. ಸರ್ವೆ ನಂಬರ್ 48ರ 17.28 ಎಕರೆ ಜಾಗವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಾಬಣ್ಣ ಒತ್ತುವರಿ ಮಾಡಿ ಮನೆ ನಿರ್ಮಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಪ್ರಭಾವಿಯಾಗಿರುವುದರಿಂದ ಇವರ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿಕೊಂಡ ಜಾಗ ವಶಪಡಿಸಿಕೊಳ್ಳಬೇಕು. ರುದ್ರಭೂಮಿಗೆ ನೀಡಿದ ಜಾಗ ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನಿವೇಶನ ಬಡವರಿಗೆ ಹಂಚಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದಿನ್ನಿ, ಹನುಮಂತು, ಉರುಕುಂದು, ನರಸಿಂಹಲು, ಮುದ್ದಪ್ಪ, ತಿಮ್ಮಪ್ಪ, ಗುರುಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.