ADVERTISEMENT

‘ರಾಜಕಾರಣದಲ್ಲಿ ಅನಂತಕುಮಾರ್‌ ಛಾಪು’

ರಾಯಚೂರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸಂತಾಪ ಸಭೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 16:25 IST
Last Updated 12 ನವೆಂಬರ್ 2018, 16:25 IST
ರಾಯಚೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಸಚಿವ ಅನಂತಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಂತಾಪ ಸೂಚಿಸಿದರು
ರಾಯಚೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಸಚಿವ ಅನಂತಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಸಂತಾಪ ಸೂಚಿಸಿದರು   

ರಾಯಚೂರು: ಕೇಂದ್ರ ಸಚಿವ ಅನಂತಕುಮಾರ್‌ ನಿಧನಕ್ಕೆ ಸಂತಾಪ ಸೂಚಿಸಿರುವ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು, ಬಿಜೆಪಿ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅಗಲಿದ ನಾಯಕನ ಆತ್ಮಕ್ಕೆ ಶಾಂತಿ ಕೋರಿದರು.

ಸಂತಾಪ ಸಭೆಯಲ್ಲಿ ಮಾತನಾಡಿದ ಹಿರಿಯ ಮುಖಂಡ ಎನ್‌. ಶಂಕ್ರಪ್ಪ, ‘ಕೇಂದ್ರ ಸಚಿವ ಅನಂತಕುಮಾರ್‌ ಅವರು ಸರಳ ವ್ಯಕ್ತಿತ್ವ ರೂಢಿಸಿಕೊಂಡಿದ್ದಲ್ಲದೆ, ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಾಣಾಕ್ಷತನದಿಂದ ರಾಜಕೀಯ ಮಾಡುತ್ತಿದ್ದ ಅವರು ದೇಶದ ರಾಜಕೀಯಕ್ಕೆ ಕಾಣಿಕೆ ನೀಡಿದ್ದಾರೆ’ ಎಂದರು.

ಕೇಂದ್ರದಲ್ಲಿ ರಾಸಾಯನಿಕ ಸಚಿವರಾಗಿ ಅವರು ಮಾಡಿರುವ ಕೆಲಸಗಳನ್ನು ಜನರು ಸ್ಮರಿಸುವಂತಾಗಿದೆ. ಜನೌಷಧಿ ಮಳಿಗೆಗಳನ್ನು ಸ್ಥಾಪಿಸುವುದಕ್ಕೆ ವಿಶೇಷ ಕಾಳಜಿ ವಹಿಸಿದ್ದರು. ಅಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್‌ ಔಷಧಿ ಕೇಂದ್ರಗಳನ್ನು ತೆರೆದು ಬಡವರಿಗೆ ಅಗ್ಗ ದರದಲ್ಲಿ ಔಷಧಿಗಳನ್ನು ಒದಗಿಸುವ ಕನಸನ್ನು ನನಸು ಮಾಡಿದ್ದಾರೆ. ಅಲ್ಲದೆ, ಲಕ್ಷಾಂತರ ರೂಪಾಯಿ ಬೆಲೆಬಾಳುತ್ತಿದ್ದ ಸ್ಟಂಟ್‌ಗಳನ್ನು ಕಡಿಮೆ ಬೆಲೆಗೆ ದೊರೆಯುವಂತೆ ಮಾಡಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಅನಂತಕುಮಾರ್‌ ಕೊಡುಗೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ಪರವಾಗಿ ಬೇಡಿಕೆಗಳನ್ನು ಇಟ್ಟುಕೊಂಡು ಯಾರು ಬೇಕಾದರೂ ದೆಹಲಿಗೆ ಹೋಗಿದ್ದಾಗ, ಪಕ್ಷಭೇದವಿಲ್ಲದೆ ಸಹಾಯ ಮಾಡಿರುವುದನ್ನು ಎಲ್ಲರೂ ಹೇಳಿಕೊಳ್ಳುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಶಾಸಕ ಡಾ. ಶಿವರಾಜ ಪಾಟೀಲ ಮಾತನಾಡಿ, ಅನಂತಕುಮಾರ್‌ ಅವರು ಯಾವುದೇ ಇಲಾಖೆ ಅಥವಾ ಖಾತೆಯನ್ನು ವಹಿಸಿಕೊಂಡಿದ್ದರೂ ಅವರದ್ದೇ ಆದ ಶೈಲಿಯಲ್ಲಿ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ. ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರು. ಜಿಎಸ್‌ಟಿ ಜಾರಿಗೊಳಿಸುವ ಸಂದರ್ಭದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಕೋರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಗೌಡ ಜಾಡಲದಿನ್ನಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಅನಂತಕುಮಾರ್‌ ಅವರು ವಹಿಸಿದ್ದ ಕಾಳಜಿ ವಿಶೇಷವಾಗಿದೆ. ಅವರಿಂದಾಗಿ ರಾಜ್ಯಕ್ಕೆ ಅನೇಕ ಯೋಜನೆಗಳು ಮತ್ತು ಅನುದಾನ ಬಂದಿದೆ. ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದ ಸಹಾಯ ಪಡೆಯಲು ಸರ್ಕಾರಗಳಿಗೆ ನೆರವಾಗಿದ್ದಾರೆ. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಮುಖಂಡರಾದ ಎ.ಪಾಪರೆಡ್ಡಿ, ಬಸನಗೌಡ ಬ್ಯಾಗವಾಟ್, ಆರ್ ತಿಮ್ಮಯ್ಯ, ರಾಜಕುಮಾರ, ಶಶಿರಾಜ ಮಸ್ಕಿ, ಶಿವಬಸಪ್ಪ ಮಾಲಿ ಪಾಟೀಲ್, ನರಸಿಂಹ ನಾಯಕ್, ರಮಾನಂದ್ ಯಾದವ್, ಬಂಡೇಶ್ ವಲಕಂದಿನ್ನಿ, ರವೀಂದ್ರ ಜಲ್ದಾರ್, ನೀಲಕಂಠೇಗೌಡ, ರಾಮನಗೌಡ ಜಾಲಿಬೆಂಚಿ, ನರಸಪ್ಪ ಯಕ್ಲಾಸಪೂರು, ಆಂಜನೇಯ ಯಕ್ಲಾಸಪುರ್, ನರಸಪ್ಪ ಜೇಗರಕಲ್, ಎ.ಚಂದ್ರಶೇಖರ್, ಯು.ಆಂಜನೇಯ, ಬಂಗಿ ನರಸರೆಡ್ಡಿ, ನಾರಾಯಣರಾವ್ ಪೂರತಿಪ್ಲಿ, ನಗರಸಭೆ ಸದಸ್ಯರಾದ ಇ.ಶಶಿರಾಜ್, ಕೆ.ನಾಗರಾಜ್, ಬಿ.ನಾಗರಾಜ್, ಮಹೇಂದ್ರ ರೆಡ್ಡಿ, ರಾಮಚಂದ್ರ ಕಡಗೊಳ್, ಪ್ರದೀಪ್ ಶಾನಬಾಳ್, ಟಿ.ಶ್ರೀನಿವಾಸ್ ರೆಡ್ಡಿ, ಡಾ.ನಾಗರಾಜ್ ಬಾಲ್ಕಿ , ಎಲ್.ಜಿ.ಶಿವಕುಮಾರ್, ಬಂಗಿ ಮುನಿರೆಡ್ಡಿ ಬಸವರಾಜ್ ಅಚ್ಚೊಳ್ಳಿ, ಬಿ.ನಾಗೇಶ್, ನಾಗನಗೌಡ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಗಂಗೂಬಾಯಿ, ಶರಣಮ್ಮ ಕಾಮರೆಡ್ಡಿ, ನಾಗವೇಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.