ರಾಯಚೂರು: ಕೋವಿಡ್ನಿಂದ ಮೃತಪಟ್ಟ 25 ಅಂಗನವಾಡಿ ಕಾರ್ಯಕರ್ತೆಯರಿಗೆ ₹30 ಲಕ್ಷ ಪರಿಹಾರ ನೀಡಬೇಕು. ಕಾರ್ಯಕರ್ತೆಯರಿಗೆ ಅಗತ್ಯವಾದ ಮಾಸ್ಕ್, ಸ್ಯಾನಿಟೈಸರ್ ಇತರೆ ಸುರಕ್ಷತಾ ಸಾಮಾಗ್ರಿಗಳನ್ನು ನೀಡಬೇಕು. ಗರ್ಭಿಣಿ, ಬಾಣಂತಿಯರಿಗೆ ಕೆಲಸದಿಂದ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಮೊದಲನೇ ಅಲೆಯಲ್ಲಿ ಕರ್ತವ್ಯನಿರತ ಅಂಗನವಾಡಿ ನೌಕರರು ಮೃತಪಟ್ಟಿದರೂ ಈವರೆಗೆ ಪರಿಹಾರ ನೀಡಿಲ್ಲ. ಕೋವಿಡ್ ಸಂದರ್ಭದಲ್ಲಿ ಮನೆಮನೆಗೆ ಭೇಟಿ ಸ್ಯಾಂಪಲ್ ಸಂಗ್ರಹ, ಮಾತ್ರೆ ವಿತರಣೆ, ಜಾಗೃತಿ ಕಾರ್ಯಕ್ರಮ, ಸಮೀಕ್ಷೆ ಸೇರಿದಂತೆ ವಿವಿಧ ಕೆಲಸ ಮಾಡುತ್ತಿದ್ದು ಅಗತ್ಯ ರಕ್ಷಣೆ ನೀಡುತ್ತಿಲ್ಲ ಎಂದು ದೂರಿದರು.
ಕೋವಿಡ್ ಎರಡನೇ ಅಲೆಯಲ್ಲಿ ಕೆಲಸಕ್ಕೆ ವೈಯಕ್ತಿಕ ನೇಮಕ ಪತ್ರವನ್ನು ಖಾತ್ರಿ ಪಡಿಸಬೇಕು. ಆಹಾರ ಧಾನ್ಯಗಳನ್ನು ಹಂಚುವಾಗ ಪ್ರತಿ ಫಲಾನುಭವಿಗಳಿಗೆ ಪ್ಯಾಕೆಟ್ ರೂಪದಲ್ಲಿ ಕೊಡಬೇಕು. ಆಹಾರ ಧಾನ್ಯಗಳ ಹಂಚಿಕೆಗೆ ವಿಶೇಷ ಟಿ.ಎ. ಕೊಡಬೇಕು. 50 ವರ್ಷ ಮೇಲ್ಪಟ್ಟವರಿಗೆ, ಗರ್ಭಿಣಿ, ಬಾಣಂತಿಯರು ಮತ್ತು ಮಾರಣಾಂತಿಕ ಖಾಯಿಲೆಯಿರುವ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರಿಗೆ ಕೋವಿಡ್ ಕೆಲಸದಿಂದ ವಿನಾಯ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಉಳಿದ ಕೆಲಸಗಳನ್ನು ಮುಂದೂಡಬೇಕು. ಬಾಕಿಯಿರುವ ಗೌರವಧನ, ಮೊಟ್ಟೆ ಹಣ ಕೂಡಲೇ ಬಿಡುಗಡೆ ಮಾಡಬೇಕು. ಮೊಟ್ಟೆ ಹಣ ಮುಂಗಡವಾಗಿ ಹಾಕಬೇಕು ಇಲ್ಲದಿದ್ದರೆ ಆಹಾರ ಧಾನ್ಯಗಳೊಟ್ಟಿಗೆ ಸರಬರಾಜು ಮಾಡಬೇಕು. ಈಗ ರದ್ದು ಪಡಿಸಿರುವ ಬೇಸಿಗೆ ರಜೆಯನ್ನು ಮಳೆಗಾಲದಲ್ಲಿ ಕೊಡಬೇಕು ಅಥವಾ 15 ದಿನಗಳ ಹೆಚ್ಚುವರಿ ವೇತನ ಕೊಡಬೇಕು.
ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷೆ ಎಚ್ ಪದ್ಮಾ, ರಂಗಮ್ಮ, ಅನ್ವರ್, ಕೆ. ಜಿ ವೀರೇಶ ಗೋಕರಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.