ಸಿಂಧನೂರು (ರಾಯಚೂರು ಜಿಲ್ಲೆ): ನಗರದ ಕುಷ್ಟಗಿ ರಸ್ತೆ ಬಳಿಯ ಜಾನುವಾರು ಸಂತೆಗೆ ಬರುವ ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಆರೋಪಿಸಿ ಜಾನುವಾರು ರಕ್ಷಣೆಗೆ ಮುಂದಾದ ಬಜರಂಗದಳದ ಕಾರ್ಯಕರ್ತರ ಮೇಲೆ ವ್ಯಾಪಾರಿಗಳು ಹಲ್ಲೆ ನಡೆಸಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿ ಮಂಗಳವಾರ ಜಾನುವಾರು ಸಂತೆ ನಡೆಯುತ್ತದೆ. ಸಂತೆಗೆ ಸೋಮವಾರವೇ ಜಾನುವಾರು ಹೊಡೆದುಕೊಂಡು ಬರಲಾಗುತ್ತದೆ. ಜಾನುವಾರ ಸಂತೆ ನಡೆಯುವ ಸ್ಥಳಕ್ಕೆ ಸೋಮವಾರ ತೆರಳಿದ ಬಜರಂಗದಳದ ತಾಲ್ಲೂಕು ಸಂಚಾಲಕ ಮನೋಹರ, ನಗರ ಸಂಚಾಲಕ ಶಿವಕುಮಾರ, ಕಾರ್ಯಕರ್ತರಾದ ಅನಿಲಕುಮಾರ, ದೇವರಾಜ ಸೇರಿ 8 ಜನರು ಜಾನುವಾರು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ವ್ಯಾಪಾರಿಗಳಿಗೆ ಅಡ್ಡಿಪಡಿಸಿದ್ದಾರೆ.
ಆಗ ವ್ಯಾಪಾರಿಗಳು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ವ್ಯಾಪಾರಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಬಿ.ಎಸ್.ತಳವಾರ, ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.