ADVERTISEMENT

‘ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಿ’

ಸಚಿವ ಡಾ.ಶರಣಪ್ರಕಾಶ ಪಾಟೀಲ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 15:56 IST
Last Updated 12 ಏಪ್ರಿಲ್ 2025, 15:56 IST
ರಾಯಚೂರಿನ ಜಿಲ್ಲಾಡಳಿತ ಸಭಾಂಗಣದಲ್ಲಿ ಶನಿವಾರ ನಡೆದ  ಕುಡಿಯವ ನೀರು ಪೂರೈಕೆ ಕುರಿತು ನಡೆದ ಸಭೆಯಲ್ಲಿ ಸಚಿವ ಡಾ. ಶರಣಪ್ರಕಾಶ ‍ಪಾಟೀಲ ಮಾತನಾಡಿದರು. ಜಿ. ಕುಮಾರ ನಾಯಕ, ಎನ್. ಎಸ್. ಬೋಸರಾಜು, ಆರ್. ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ನಿತೀಶ್ ಕೆ, ರಾಹುಲ್ ಪಾಂಡ್ವೆ, ಎಂ. ಪುಟ್ಟಮಾದಯ್ಯ, ಜುಬಿನ್ ಮೊಹಪಾತ್ರ ಉಪಸ್ಥಿತರಿದ್ದರು.
ರಾಯಚೂರಿನ ಜಿಲ್ಲಾಡಳಿತ ಸಭಾಂಗಣದಲ್ಲಿ ಶನಿವಾರ ನಡೆದ  ಕುಡಿಯವ ನೀರು ಪೂರೈಕೆ ಕುರಿತು ನಡೆದ ಸಭೆಯಲ್ಲಿ ಸಚಿವ ಡಾ. ಶರಣಪ್ರಕಾಶ ‍ಪಾಟೀಲ ಮಾತನಾಡಿದರು. ಜಿ. ಕುಮಾರ ನಾಯಕ, ಎನ್. ಎಸ್. ಬೋಸರಾಜು, ಆರ್. ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ನಿತೀಶ್ ಕೆ, ರಾಹುಲ್ ಪಾಂಡ್ವೆ, ಎಂ. ಪುಟ್ಟಮಾದಯ್ಯ, ಜುಬಿನ್ ಮೊಹಪಾತ್ರ ಉಪಸ್ಥಿತರಿದ್ದರು.    

ರಾಯಚೂರು: ‘ಹಣದ ಕೊರತೆ ಇದ್ದರೆ ತಿಳಿಸಿ, ಅನುದಾನ ಕೊಡುತ್ತೇವೆ. ನೀರು ಇಲ್ಲ ಎಂದು ಜನರು ಕೊಡ ಹಿಡಿದು ಅಲೆದಾಡುವಂತಾಗಬಾರದು. ನೀರು ಪೂರೈಕೆ ವಿಷಯದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಶನಿವಾರ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯವ ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ನೀರಿಲ್ಲ ಎಂದು ಜನರು ಪ್ರತಿಭಟನೆಗೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಎಲ್ಲ ತಾಲ್ಲೂಕುಗಳಲ್ಲಿ  ಕಾರ್ಯಪಡೆ ಸಭೆ ‌ನಡೆಸಬೇಕು. ಬೇಸಿಗೆಯ ಸಂದರ್ಭದಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಕರೆ ಸ್ವೀಕರಿಸಿ ಜನತೆಗೆ ಸ್ಪಂದನೆ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿನ ಗ್ರಾಮಗಳಿಗೆ ನಿಯಮಿತವಾಗಿ ಟ್ಯಾಂಕರ್ ಪೂರೈಕೆ ಮಾಡಬೇಕು. ಇದರ ಜೊತೆಗೆ ಜನರಿಗೆ ಅನುಕೂಲವಾಗುವಂತೆ ಹಾಗೆ ಸಹಾಯವಾಣಿ ಆರಂಭಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

‘ಸಿಂಧನೂರು, ಮಸ್ಕಿ ಹಾಗೂ ಮಾನ್ವಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಬೆಳೆ ಹಾನಿಗೀಡಾದ ಬಗ್ಗೆ ಕೂಡಲೇ  ಸಮೀಕ್ಷೆ ನಡೆಸಿ ವರದಿ ನೀಡಲು ಕ್ರಮ ವಹಿಸಬೇಕು. ನೋಡಲ್ ಅಧಿಕಾರಿಗಳು, ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮುತುವರ್ಜಿವಹಿಸಿ ಕಾರ್ಯನಿರ್ವಹಿಸಬೇಕು’ ಎಂದು ’ ಎಂದು ಸೂಚಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ತಕ್ಷಣ ಕೊಳುವೆಬಾವಿ ಮೂಲಕ ನೀರು ಪೂರೈಸಬೇಕು. ಇತ್ತೀಚೆಗೆ ಆಲಿಕಲ್ಲು ಮಳೆ ಸುರಿದು ಹಾನಿಗೀಡಾಗಿದ್ದಕ್ಕೆ ಅಗತ್ಯ ಪರಿಹಾರ ಕಲ್ಪಿಸಬೇಕು’ ಎಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.

ಶಾಸಕ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾತನಾಡಿ, ‘ರಾಯಚೂರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೆಲವು ಕೆರೆಗಳನ್ನು ತುಂಬಿಸಬೇಕು. ಜಲಜೀವನ ಮಿಷನ್,‌ ಜಲಧಾರೆ ಯೋಜನೆಗಳು ಬಂದ ಬಳಿಕ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕ ಅನುದಾನ ಸಿಗುತ್ತಿಲ್ಲ‘ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ಪಂಚಾಯಿತಿ ರಾಜ್ಯ ಇಲಾಖೆಯಿಂದ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

ಸಮೀಕ್ಷೆ ನಡೆಸಿ: ‘ಸಿಂಧನೂರು ತಾಲ್ಲೂಕಿನ ಚನ್ನಹಳ್ಳಿ ಸೇರಿ ಇನ್ನಿತರ ಕಡೆ ಬಿರುಗಾಳಿ ಹಾಗೂ ಮಳೆಯ ಅಬ್ಬರಕ್ಕೆ ಬೆಳೆ ಹಾನಿಯಾಗಿದೆ. ಇದರ ಸಮೀಕ್ಷೆ ಆಗಬೇಕು’ ಎಂದು ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.

ರಾಯಚೂರು ನಗರದ ಶಾಸಕ ಶಿವರಾಜ ಪಾಟೀಲ ಮಾತನಾಡಿ, ‘ರಾಯಚೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ನಗರಕ್ಕೆ ನೀರು ಪೂರೈಸುವ ಪಂಪ್‌ಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಜಾಕ್‌ವೆಲ್‌ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ತಿಳಿಸಿದರು.

ಮಸ್ಕಿ ಕ್ಷೇತ್ರದ್ದೆ ಪ್ರತ್ಯೇಕವಾಗಿ ಸಭೆ ನಡೆಸಿ ಮಸ್ಕಿ ತಾಲ್ಲೂಕಿನಲ್ಲಿನ ಜ್ವಲಂತ ಕುಡಿಯುವ ನೀರು ಪೂರೈಕೆಯ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹರಿಸಬೇಕು.  ಸಮಸ್ಯೆ ಇರುವ ಕಡೆಗೆ ಭೇಟಿ ನೀಡಬೇಕು ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯ ಬಹುತೇಕ ಕಡೆಯ ಜನರು ಕೆರೆಯ ನೀರನ್ನೇ ಅವಲಂಭಿಸಿದ್ದಾರೆ. ಇದನ್ನು ಅಧಿಕಾರಿಗಳು ಅರಿತು ಜನತೆಗೆ ಸ್ಪಂದನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ತಿಳಿಸಿದರು.

ಲಿಂಗಸುಗೂರು ತಾಲ್ಲೂಕಿನಲ್ಲಿ 21 ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನೇ ಬಾಡಿಗೆಗೆ ಪಡೆದು ನೀರು ಪೂರೈಸುತ್ತಿದ್ದೇವೆ. ದೇವದುರ್ಗ ತಾಲ್ಲೂಕಿನಲ್ಲಿ 25 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಆಯಾ ತಾಲ್ಲೂಕಿನ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ಸಂಸದ ಜಿ.ಕುಮಾರ ನಾಯಕ, ಶಾಸಕ ಜಿ. ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತ ಬಸವಣಪ್ಪ ಕಲಶೆಟ್ಟಿ, ಗಜಾನನ ಬಾಳೆ ಪಾಲ್ಗೊಂಡಿದ್ದರು.

ರಾಯಚೂರಿನಲ್ಲಿ   ಶನಿವಾರ ನಡೆದ ಸಭೆಯಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿದರು.  ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.