ADVERTISEMENT

ಅಭಿವೃದ್ಧಿಗೆ ಪಕ್ಷಾತೀತ ಶ್ರಮ ಅಗತ್ಯ: ಪತ್ರಕರ್ತ ಭಾಸ್ಕರರಾವ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 15:09 IST
Last Updated 1 ಮಾರ್ಚ್ 2020, 15:09 IST
ರಾಯಚೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ಅವರು ಡಾ.ರಜಾಕ್ ಉಸ್ತಾದ್ ಅವರು ಬರೆದ ‘ಹೈದ್ರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ ಕಥೆ-ವ್ಯಥೆ’ ಕೃತಿ ಲೋಕಾರ್ಪಣೆ ಮಾಡಿದರು
ರಾಯಚೂರಿನಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪತ್ರಕರ್ತ ಎಂ.ಕೆ.ಭಾಸ್ಕರರಾವ್‌ ಅವರು ಡಾ.ರಜಾಕ್ ಉಸ್ತಾದ್ ಅವರು ಬರೆದ ‘ಹೈದ್ರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ ಕಥೆ-ವ್ಯಥೆ’ ಕೃತಿ ಲೋಕಾರ್ಪಣೆ ಮಾಡಿದರು   

ರಾಯಚೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರದಾನವಾದ 371–ಜೆ ಕಾಯ್ದೆಯಡಿ ಜನಪ್ರತಿನಿಧಿಗಳುಪಕ್ಷಾತೀತವಾಗಿ ಶ್ರಮಿಸಿದಾಗ ಮಾತ್ರ ಈ ಭಾಗ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಪತ್ರಕರ್ತ ಎಂ.ಕೆ.ಭಾಸ್ಕರರಾವ್ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಶಿಕ್ಷಣ ಕಿರಣ ಸಂಸ್ಥೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ರಜಾಕ್ ಉಸ್ತಾದ್ ಅವರು ಬರೆದ ‘ಹೈದ್ರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ ಕಥೆ-ವ್ಯಥೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಭಾಗದ ಹೋರಾಟಗಾರರ ಫಲವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ 371–ಜೆ ಜಾರಿಗೆ ಬಂದಿದೆ. ಮಂಡಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದರೂ ಅನುದಾನ ಖರ್ಚು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.

ADVERTISEMENT

ಈ ಭಾಗದ ಜನರು ಸುಳ್ಳನ್ನೇ ಸತ್ಯವೆಂದು ನಂಬುತ್ತಾರೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಿ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲರಾದ ಪರಿಣಾಮ ಅಡಳಿತ ನಡೆಸಿದ ಮೂರು ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಆಡಳಿತಾವಧಿಲ್ಲಿ 8 ರಿಂದ 10 ಶಾಸಕರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದರು. ಆದರೆ, ಪ್ರಸ್ತುತ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತಿದೆ. ಅಷ್ಟು ಸಚಿವರು ಇದ್ದರೂ ಕೂಡ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಾಧ್ಯವಾಗದಿದ್ದಾಗ ಒಬ್ಬ ಸಚಿವರಿಂದ ಆಗುತ್ತಾ ಎಂದು ಪ್ರಶ್ನಿಸಿದರು. ಅಭಿವೃದ್ಧಿ ವಿಚಾರ ಬಂದಾಗ ಈ ಭಾಗದ ಶಾಸಕರು ಪಕ್ಷಾತೀತ ಮನೋಭಾವನೆ ತಾಳಬೇಕು ಎಂದು ಸಲಹೆ ನೀಡಿದರು.

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಏಕತೆ ಮುಖ್ಯವಾಗಿದ್ದು ಜಿಲ್ಲೆಗಳನ್ನು ಬೆಸೆಯುವುದಕ್ಕಿಂತ ಮನಸುಗಳು ಬೆಸೆಯುವ ಕಾರ್ಯಗಳಾಗಬೇಕಿದೆ. ಸರ್ಕಾರ ಹಾಗೂ ಈ ಭಾಗದ ಶಾಸಕರು ಕೇವಲ ಅನುದಾನ ನೀಡಿದರೆ ಸಾಲದು, ಇಲ್ಲಿನ ಮಾನವ ಸಂಪನ್ಮೂಲ ಬಳಸಿಕೊಂಡು ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸಬೇಕು. ಈ ಭಾಗದ ವಿದ್ಯಾರ್ಥಿಗಳು 371–ಜೆ ಕಾಯ್ದೆಯ ಸಂಪೂರ್ಣ ಲಾಭ ಪಡೆದು ಶೈಕ್ಷಣಿಕ, ಔದ್ಯೋಗಿಕ ಸ್ಥಾನಮಾನ ಪಡೆಯಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಿವಪ್ರಕಾಶ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾದ 371–ಜೆ ಕುರಿತು ಶಾಲಾ ಕಾಲೇಜುಗಳಲ್ಲಿ ಮನದಟ್ಟು ಮಾಡಿಕೊಡಬೇಕಿದೆ. ವಿಚಾರಗೋಷ್ಠಿ, ಪ್ರಬಂಧ, ಭಾಷಣಗಳನ್ನು ಏರ್ಪಡಿಸಬೇಕು ಅಂದಾಗ ಮಾತ್ರ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯ. ಡಾ.ರಜಾಕ್ ಉಸ್ತಾದ್ ಅವರು ಈ ಪುಸ್ತಕ ಸಾಕಷ್ಟು ವಿಚಾರಗಳನ್ನು ಒಳಗೊಂಡಿದ್ದು ಈ ಭಾಗದವರು ಓದಿ ಅರ್ಥಮಾಡಿಕೊಳ್ಳಬೇಕು, ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದರು.

ಕೃತಿ ಲೇಖಕ ಡಾ.ರಜಾಕ್ ಉಸ್ತಾದ್ ಅವರು ಮಾತನಾಡಿ, ಕಾವೇರಿಗಿಂತ ಉದ್ದವಾದ ಕೃಷ್ಣನದಿ ಈ ಭಾಗದಲ್ಲಿ ಹರಿಯುತ್ತಿದ್ದರೂ ಕನ್ನಡ ನಾಡಿನ ಜೀವನದಿ ಕಾವೇರಿ, ಕೋಲಾರ ಗಣಿ ಬಂದ್ ಆಗಿ ವರ್ಷಗಳಾದರೂ ಕೂಡ ಶ್ರೇಷ್ಠ ಎಂದು ಬಿಂಬಿಸುತ್ತಾರೆ. ಹಟ್ಟಿ ಚಿನ್ನದ ಗಣಿ ಬಗ್ಗೆ ಮಾತನಾಡುವುದಿಲ್ಲ ಎಂದು ತಾರತಮ್ಯದ ಕುರಿತು ವಿವರಿಸಿದರು.

ನಗರಸಭೆ ಸದಸ್ಯ ಜಯಣ್ಣ ಅವರು ಮಾತನಾಡಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಶಿಖರಮಠ, ಕೋಶಾಧ್ಯಕ್ಷ ಸೈಯದ್ ಹಫೀಜುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.