ಮಸ್ಕಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಕೋಚಿಂಗ್ ಸೆಂಟರ್ ನಲ್ಲಿ ಎರಡನೇ ತರಗತಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಯ ಸೊಂಟದ ಸುತ್ತಲೂ ಸುಟ್ಟಗಾಯಗಳಾಗಿ, ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುವುದು ಒಂದು ವಾರದ ಬಳಿಕ ಶುಕ್ರವಾರ ಬೆಳಕಿದೆ ಬಂದಿದೆ.
ಮಿಟ್ಟಿಕೆಲ್ಲೂರು ಗ್ರಾಮದ ಅಖಿಲ ವೆಂಕಟೇಶ ಗಾಯಗೊಂಡ ವಿದ್ಯಾರ್ಥಿಯಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾನೆ.
'ಶಾಲೆಯಲ್ಲಿ ಮಲಮೂತ್ರ ಮಾಡಿದ ಕಾರಣ ಶಿಕ್ಷಕರೊಬ್ಬರು ವಿದ್ಯಾರ್ಥಿ ಅಖಿಲ ಮೇಲೆ ಬಿಸಿ ನೀರು ಚೆಲ್ಲಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಇದರ ತನಿಖೆ ನಡೆಸಿ, ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತೀವ್ರ ಗಾಯಗೊಂಡ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು' ಎಂದು ಜಿಲ್ಲಾ ಮಕ್ಕಳ ಆಯೋಗದ ನಿರ್ದೇಶಕ ಸುದರ್ಶನ ರಾಜ್ಯ ಮಕ್ಕಳ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿಶ್ವನಾಥ ಅವರು ಶಾಲೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಬಾಲಕ ಹಾಗೂ ಪಾಲಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. 'ಪಾಲಕರು ಯಾರ ವಿರುದ್ಧವೂ ದೂರು ನೀಡುತ್ತಿಲ್ಲ. ಆದ್ದರಿಂದ ಈ ಬಗ್ಗೆ ತನಿಖೆ ಮಾಡುವಂತೆ ಜಿಲ್ಲಾ ಮಕ್ಕಳ ಆಯೋಗ ಹಾಗೂ ಮಸ್ಕಿ ಠಾಣೆಗೆ ಮನವಿ ಸಲ್ಲಿಸಲಾಗಿದೆ' ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿದ್ಯಾರ್ಥಿ ತಂದೆ ವೆಂಕಟೇಶ, 'ಮದ್ಯಾಹ್ನ ಬಾತ್ ರೋಮಿಗೆ ಹೋಗಿದ್ದ ಸಂದರ್ಭದಲ್ಲಿ ಸೋಲಾರ್ ನ ಬಿಸಿ ನೀರು ಗಮನಿಸಿದೆ ಮೈಮೇಲೆ ಹಾಕಿಕೊಂಡಿದ್ದರಿಂದ ಈ ಘಟನೆ ನಡೆದಿದೆ. ಘಟನೆಯಲ್ಲಿ ನನ್ನ ಮಗನ ತಪ್ಪು ಇದ್ದ ಕಾರಣ ನಾನು ಯಾರ ವಿರುದ್ಧವೂ ದೂರು ದಾಖಲು ಮಾಡಿಲ್ಲ' ಎಂದು 'ಪ್ರಜಾವಾಣಿ' ಗೆ ತಿಳಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.