ಶಾಲೆ
(ಸಾಂಕೇತಿಕ ಚಿತ್ರ)
ಲಿಂಗಸುಗೂರು (ರಾಯಚೂರು ಜಿಲ್ಲೆ): ಮನೆ ಬಿಟ್ಟು ಹೋಗಿದ್ದ ತಾಲ್ಲೂಕಿನ ಕರಡಕಲ್ ಗ್ರಾಮದ ಮೂವರು ಬಾಲಕರು ಹಾಸನ ಜಿಲ್ಲೆಯ ಆಲೂರಿನಲ್ಲಿ ಪತ್ತೆಯಾಗಿದ್ದಾರೆ.
ಶಾಲೆಗೆ ತೆರಳಲು ಇಷ್ಟವಿಲ್ಲದ ಕಾರಣ ಮನೆ ಬಿಟ್ಟು ಬಂದಿದ್ದೇವೆ ಎಂದು ಬಾಲಕರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಡಕಲ್ ಗ್ರಾಮದ ಬಾಲಕರಾದ ಮಂಜುನಾಥ ಬ್ಯಾಗಿ (14), ರೋಹಿತ್ ಭಜಂತ್ರಿ (14) ಹಾಗೂ ಪ್ರಜ್ವಲ್ ಗದ್ದೆಪ್ಪ (16) ನಾಪತ್ತೆಯಾದ ಕುರಿತು ಜೂನ್ 6ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕರ ಪತ್ತೆಗಾಗಿ ಪೊಲೀಸ್ ಇಲಾಖೆಯು ಸಿಬ್ಬಂದಿ ಈರಣ್ಣ, ಭರಮನಗೌಡ, ಶ್ರೀಕಾಂತ, ಭೀಮಣ್ಣ ಹಾಗೂ ಸಿದ್ದಪ್ಪ ಅವರನ್ನು ಒಳಗೊಂಡ ತಂಡ ರಚಿಸಿತ್ತು.
ಬಾಲಕರು ಕೋಲಾರ, ಮಂಗಳೂರು, ಬೆಂಗಳೂರು ಹಾಗೂ ಇತರೆ ನಗರಗಳಿಗೆ ತೆರಳಿರುವ ಸಾಧ್ಯತೆಯ ಆಧಾರದ ಮೇಲೆ ಪೊಲೀಸ್ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಈ ವೇಳೆ ಹಾಸನ ಜಿಲ್ಲೆಯ ಆಲೂರಿನನಲ್ಲಿ ಬಾಲಕರು ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.
ಬಾಲಕರನ್ನು ವಿಚಾರಿಸಿದಾಗ ಶಾಲೆಗೆ ಹೋಗಲು ಇಷ್ಟವಿಲ್ಲ. ಮನೆ ಬಿಟ್ಟು ಹೋದರೆ ಶಾಲೆಗೆ ಹೋಗುವಂತೆ ತಂದೆ–ತಾಯಿ ಹೇಳುವುದಿಲ್ಲ ಎನ್ನುವ ಕಾರಣಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.