ಸಿಂಧನೂರು: ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಕರಿವೀರೇಶ್ವರ ದೇವಸ್ಥಾನದ ಪೂಜಾರಿ ನಿಂಗಪ್ಪ ಹನುಮಂತಪ್ಪ (55) ಅವರ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರೆದಿದ್ದು, ಇನ್ನೂ ಪತ್ತೆಯಾಗಿಲ್ಲ.
ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ಬೆಳಿಗ್ಗೆಯಿಂದ ರಾತ್ರಿವರೆಗೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ
ಬೋಟ್ ಮೂಲಕ ಅರ್ಚಕರಿಗಾಗಿ ನಿರಂತರ ಶೋಧ ನಡೆಸಿದರು. ಮುಕ್ಕುಂದಾ, ದಢೇಸುಗೂರು, ಕೆಂಗಲ್ ಸೇರಿದಂತೆ ಸುಮಾರು 10 ಕಿ.ಮೀ ದೂರದವರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ.
ತುಂಗಭದ್ರಾ ಜಲಾಶಯದಿಂದ 1.48 ಲಕ್ಷ ಕ್ಯುಸೆಕ್ ಒಳಹರಿವಿನ ನೀರನ್ನು ನದಿಗೆ ಹರಿಬಿಟ್ಟಿರುವುದರಿಂದ ನೀರಿನ ರಭಸ ತೀವ್ರ ಸ್ವರೂಪದಲ್ಲಿದೆ. ಹೀಗಾಗಿ ನದಿಗೆ ಬಿದ್ದ ಅರ್ಚಕ ದೂರ ಹೋಗಿರುವ ಸಂಭವವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಗಾನೂರು, ಮಾನ್ವಿ, ಯರಗೇರಾ, ಇಡಪನೂರು, ಮಂತ್ರಾಲಯಂ, ಕವಿತಾಳ, ಹಚ್ಚೊಳ್ಳಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ಅರ್ಚಕರ ದೇಹ ಪತ್ತೆಯಾದರೆ ಪರಿಶೀಲಿಸಿ ತಕ್ಷಣವೇ ತಿಳಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ನಾಳೆ ನೀರಿನ ಮಟ್ಟ ಕಡಿಮೆಯಾ ಗುವ ಸಾಧ್ಯತೆ ಇದೆ. ನಾಳೆಯೂ ತೆಪ್ಪ ಹಾಗೂ ಬೋಟ್ನಿಂದ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಪಿಐ ಉಮೇಶ ಕಾಂಬಳೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.