ADVERTISEMENT

ಪುತ್ರನ ನೇತ್ರದಾನ ಮಾಡಿದ ದಂಪತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 13:52 IST
Last Updated 27 ಡಿಸೆಂಬರ್ 2018, 13:52 IST
ರಾಯಚೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ತಂದೆ–ತಾಯಿ ಹಾಗೂ ಸಂಬಂಧಿಗಳು
ರಾಯಚೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯ ತಂದೆ–ತಾಯಿ ಹಾಗೂ ಸಂಬಂಧಿಗಳು   

ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗೆ ಮೂರು ತಿಂಗಳು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದು, ಮೃತನ ನೇತ್ರಗಳು ಹಾಗೂ ಅಂಗಾಂಗಗಳನ್ನು ಆತನ ಪೋಷಕರು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ತಾಲ್ಲೂಕಿನ ಕುಕುನೂರು ಗ್ರಾಮದ ಈರಣ್ಣ, ಸರಸ್ವತಿ (ಈರಮ್ಮ) ದಂಪತಿಯ ಏಕೈಕ ಪುತ್ರ ಪ್ರಶಾಂತಕುಮಾರ್ (15) ಅಪಘಾತದಿಂದ ಚೇತರಿಸಿಕೊಳ್ಳದೆ ಮೃತಪಟ್ಟವರು. ಮೂರು ತಿಂಗಳ ಹಿಂದೆ ಯರಮರಸ್ ಬಳಿ ಈ ಅಪಘಾತ ಘಟನೆ ನಡೆದಿತ್ತು. ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿ ಕೋಮಾ ಸ್ಥಿತಿಗೆ ತಲುಪಿದ್ದ.

₹30 ಲಕ್ಷ ವೆಚ್ಚ: ಕೋಮಾದಲ್ಲಿರುವ ಮಗನನ್ನು ಬದುಕಿಸಿಕೊಳ್ಳಲು ದಂಪತಿಯು ಮೂರು ಎಕರೆ ಜಮೀನು ಕೂಡಾ ಮಾರಾಟ ಮಾಡಿದ್ದಾರೆ. ಲಕ್ಷಾಂತರ ಸಾಲ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿರಂತರ ಚಿಕಿತ್ಸೆ ಒದಗಿಸಿದ್ದರೂ ಫಲ ನೀಡಿಲ್ಲ. ಪುತ್ರನಿಗೆ ಚಿಕಿತ್ಸೆ ಕೊಡಿಸಲು ಒಟ್ಟು ₹30 ಲಕ್ಷ ವೆಚ್ಚ ಮಾಡಿದ್ದಾರೆ.

ADVERTISEMENT

ಪುತ್ರ ಬದುಕುಳಿಯಲಿಲ್ಲ. ಕನಿಷ್ಠ ಪಕ್ಷ ಆತನ ಕಣ್ಣುಗಳು, ದೇಹದ ಭಾಗಗಳಾದರೂ ಇತರರ ಬಾಳಿಗೆ ಬೆಳಕಾಗಲಿ ಎಂದು ಅಂಗಾಂಗ ದಾನ ಮಾಡಿ ಆದರ್ಶವನ್ನು ದಂಪತಿ ಮೆರೆದಿದ್ದಾರೆ. ರಾಯಚೂರಿನ ನವೋದಯ ವೈದ್ಯಕೀಯ ಆಸ್ಪತ್ರೆಯಲ್ಲಿ ನೇತ್ರಗಳನ್ನು ಸಂಗ್ರಹಿಸಿಡಲಾಗಿದೆ.

ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಈರಣ್ಣ ಅವರು ಮಗನನ್ನು ಎಸ್ಸೆಸ್ಸೆಲ್ಸಿ ಓದಿಸುತ್ತಿದ್ದರು. ಈಗ ಜಮೀನು ಇಲ್ಲದೆ, ಸಾಲ ಮಾಡಿಕೊಂಡು ಚಿಂತೆಯಲ್ಲಿ ಮುಳುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.