ADVERTISEMENT

ಡಾಫೋಡಿಲ್ಸ್‌ ವಿಜ್ಞಾನ ಕಾಲೇಜು: 7 ವಿದ್ಯಾರ್ಥಿಗಳು ಎಂಬಿಬಿಎಸ್‍ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 10:34 IST
Last Updated 4 ನವೆಂಬರ್ 2021, 10:34 IST
ಸಿಂಧನೂರಿನ ಡಾಫೋಡಿಲ್ಸ್ ವಿಜ್ಞಾನ ಕಾಲೇಜಿನ 7 ವಿದ್ಯಾರ್ಥಿಗಳು ಈಚೆಗೆ ಪ್ರಕಟವಾದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅಧಿಕ ಅಂಕಗಳನ್ನು ಪಡೆದು ಎಂಬಿಬಿಎಸ್ ಪದವಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಿನಾರಾಯಣ ಅಭಿನಂದಿಸಿದರು
ಸಿಂಧನೂರಿನ ಡಾಫೋಡಿಲ್ಸ್ ವಿಜ್ಞಾನ ಕಾಲೇಜಿನ 7 ವಿದ್ಯಾರ್ಥಿಗಳು ಈಚೆಗೆ ಪ್ರಕಟವಾದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅಧಿಕ ಅಂಕಗಳನ್ನು ಪಡೆದು ಎಂಬಿಬಿಎಸ್ ಪದವಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮಿನಾರಾಯಣ ಅಭಿನಂದಿಸಿದರು   

ಸಿಂಧನೂರು: ಸ್ಥಳೀಯ ಡಾಫೋಡಿಲ್ಸ್‌ ವಿಜ್ಞಾನ ಕಾಲೇಜಿನ 7 ವಿದ್ಯಾರ್ಥಿಗಳು ಈಚೆಗೆ ಪ್ರಕಟವಾದ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅಧಿಕ ಅಂಕಗಳನ್ನು ಪಡೆದು ಎಂಬಿಬಿಎಸ್ ಪದವಿಗೆ ಆಯ್ಕೆಯಾಗಿದ್ದಾರೆ.

ಶ್ರೀಕಾಂತ ಎನ್ನುವ ವಿದ್ಯಾರ್ಥಿ 720ಕ್ಕೆ 646 ಅಂಕಗಳನ್ನು ಪಡೆದು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಮುಖ್ಯಸ್ಥ ಲಕ್ಷ್ಮಿನಾರಾಯಣ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾಫಡಿಲ್ಸ್ ಕಾನ್ಸೆಫ್ಟ್ ಸಂಸ್ಥೆಯು ಕಳೆದ 5 ವರ್ಷಗಳಿಂದ ವಿಜ್ಞಾನ ವಿಭಾಗ ಆರಂಭಿಸಿದ್ದು, 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪದವಿಗೆ ಆಯ್ಕೆಯಾಗಿದ್ದಾರೆ. ಈ ಭಾಗದ ಪ್ರತಿಭೆಗಳಿಗೆ ಇಲ್ಲಿಯೇ ತರಗತಿ
ನೀಡಿ ದೊಡ್ಡ ಪಟ್ಟಣಗಳಿಗೆ ವಿದ್ಯಾರ್ಥಿಗಳು ತೆರಳುವ ಮತ್ತು ಅದಕ್ಕೆ ತಗಲುವ ಖರ್ಚು ಕಡಿಮೆ ಮಾಡುವುದು ಸೇರಿದಂತೆ ಪ್ರತಿಭಾ ಪಲಾಯನ ತಡೆಯುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ADVERTISEMENT

ಈ ಬಾರಿ ಸಂಸ್ಥೆಯಲ್ಲಿ ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ಮಹತ್ವಕಾಂಕ್ಷೆಯಿಂದ ಲಾಂಗ್ ಟರ್ಮ್ ಕೋಚಿಂಗ್ ಆರಂಭಿಸಿದ್ದು, 6 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅನಿಕೇತ್ ಪಾಟೀಲ್ 496, ವಿನಯ 513, ಸೈಯ್ಯದ್ ಫಯಾಜ್ ಅಲಿ 553 ಮತ್ತು ಪ್ರಿಯಾಂಕರೆಡ್ಡಿ 535 ಅಂಕಗಳನ್ನು ಪಡೆದು ವೃತ್ತಿಪರ ಕೋರ್ಸ್‍ಗಳಿಗೆ ಅರ್ಹತೆ ಪಡೆದಿದ್ದಾರೆ.

ಹಂಚಿನಾಳ ಗ್ರಾಮದ ಅಕ್ಷತಾ ಕೆ ಅವರು ಪ್ರಥಮ ಬಾರಿ ನೀಟ್ ಪರೀಕ್ಷೆಗೆ ಹಾಜರಾಗಿ ಎಂಜನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸ್‍ಗೆ ಅರ್ಹರಾಗಿದ್ದಾರೆ ಎಂದು ವಿವರಿಸಿದರು.

‘ಏಕಾಗ್ರತೆಯಿಂದ ಪ್ರತಿನಿತ್ಯದ ಪಾಠಗಳನ್ನು ಕೇಳಿ ಅಂದಿನ ಪಾಠ ಅಂದೇ ಅಭ್ಯಾಸ ಮಾಡಿದರೆ ಪ್ರಥಮ ಬಾರಿ ಪರೀಕ್ಷೆಯಲ್ಲಿಯೇ ಯಶಸ್ಸು ಪಡೆಯಲು ಸಾಧ್ಯವಿದೆ’ ಎನ್ನುವುದಕ್ಕೆ ತಾನೇ ಉದಾಹರಣೆ ಎಂದು ವಿದ್ಯಾರ್ಥಿನಿ ಅಕ್ಷತಾ ಹೇಳಿದರು.

646 ಅಂಕ ಪಡೆದು ಅವಳಿ ಜಿಲ್ಲೆಗಳಿಗೆ ಪ್ರಥಮ ಸ್ಥಾನ ಬಂದಿರುವ ಭೀಮರಾಜಕ್ಯಾಂಪಿನ ಶ್ರೀಕಾಂತ ಅವರು, ‘ಪಾಲಕರು ಮತ್ತು ಉಪನ್ಯಾಸಕರ ಪ್ರೋತ್ಸಾಹದ ಜೊತೆಗೆ ಪ್ರತಿನಿತ್ಯ 12 ತಾಸು ಅಭ್ಯಾಸ ಮಾಡಿದಕ್ಕೆ ಅಧಿಕ ಅಂಕಗಳನ್ನು ಪಡೆಯಲು ಸಾಧ್ಯವಾಯಿತು’ ಎಂದರು.

ಉಪನ್ಯಾಸಕರಾದ ತಿರುಪತಿರಾವ್, ಶಿವಶಂಕರಪ್ಪ, ನಾಗರಾಜ, ಹರಿಕೃಷ್ಣ, ಕಿಶೋರಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.