ರಾಯಚೂರು: ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಉಪಯೋಗವಾಗುವಂತೆ ಆಯ್ಕೆಮಾಡಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಹೇಳಿದರು.
ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳಾ ಅಭಿವೃದ್ಧಿ ನಿಮಗದ ಸಾಲ ಮತ್ತು ಸಹಾಯಧನ, ದೇವದಾಸಿಯರ ವಸತಿ ಸೌಲಭ್ಯ, ಚೇತನ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಯೋಜನೆ, ಅಲ್ಪಸಂಖ್ಯಾತರ ಪುನರ್ವಸತಿ, ಜಿಲ್ಲಾ ಮಕ್ಕಳ ಶಕ್ತಿ ಕೇಂದ್ರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಅರ್ಜಿ ಸಲ್ಲಿಸಿದ ಫಲಾನುಭವಿಗಳ ದಾಖಲಾತಿ ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಬೇಕು ಎಂದರು.
ಧನಶ್ರೀ ಯೋಜನೆಯಡಿ ಎಚ್ಐವಿ ಸೋಂಕಿತ ಮಹಿಳೆಯರ ಆಯ್ಕೆಗೆ 38 ಗುರಿಯಿದ್ದು, 92 ಅರ್ಜಿಗಳು ಬಂದಿದೆ. ಅರ್ಹ 38 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಚೇತನಾ ಯೋಜನೆಯಡಿ ಲೈಂಗಿಕ ಶೋಷಣೆಗೊಳಗಾದ ಮಹಿಳೆಯರ ಆಯ್ಕೆಗೆ 8 ಗುರಿಯಿದ್ದು 166 ಅರ್ಜಿಗಳು ಬಂದಿವೆ. ನಿಗದಿಯಂತೆ 8 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ದಮನಿತ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿ 5 ಗುರಿಯಿದ್ದು, 11 ಅರ್ಜಿಗಳು ಬಂದಿವೆ. ನಿಗದಿಯಂತೆ 5 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಭಾರಿ ಉಪನಿರ್ದೇಶಕ ವೀರನಗೌಡ ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು 57 ಫಲಾನುಭವಿಗಳ ಗುರಿಯಿದ್ದು, 67 ಅರ್ಜಿಗಳು ಬಂದಿವೆ. ಅದರಲ್ಲಿ 57 ಆಯ್ಕೆ ಮಾಡಲಾಗಿದೆ. ದೇವದಾಸಿ ಪುನರ್ವಸತಿ ಯೋಜನೆಯಯಡಿ 67 ಗುರಿಯಿದ್ದು, 67 ಆಯ್ಕೆ ಮಾಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಸ್.ಕುಲಕರ್ಣಿ, ಶಿಕ್ಷಣಾಧಿಕಾರಿ ಆರ್.ಇಂದಿರಾ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯಲ್ಲಪ್ಪ ಜಾಲಿಬೆಂಚಿ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಬಸವರಾಜ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಟಿ ಕಲ್ಲಯ್ಯ, ಡಾ.ಸುರೇಂದ್ರಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.