ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮಕ್ಕೆ ಮಂಜೂರಾದ ಮೊರಾರ್ಜಿ ವಸತಿ ಶಾಲೆಯನ್ನು ಪಾಮನಕಲ್ಲೂರಿನಲ್ಲಿ ಸ್ಥಾಪಿಸುವಂತೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂತೋಷ ರಾಜುಗುರು ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿ 2024 ರಲ್ಲಿ ಆದೇಶಿಸಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಏಕಾಏಕಿ ಮಸ್ಕಿಗೆ ಸ್ಥಳಾಂತರ ಮಾಡಲಿಕ್ಕೆ ಮುಂದಾಗಿರುವುದು ಖಂಡನೀಯ. ಗ್ರಾಮಸ್ಥರು ಸಂಪೂರ್ಣ ಇದನ್ನು ವಿರೋಧಿಸುತ್ತಿದ್ದಾರೆ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಎಂದು ದೂರಿದರು.
ಗ್ರಾಮದಲ್ಲಿ ಎಂಟು ಎಕರೆ ಜಾಗವಿದೆ. ವಸತಿ ಶಾಲೆ ಇಲ್ಲಿಯೇ ನಿರ್ಮಾಣ ಮಾಡಬಹುದು. ಉದ್ದೇಶ ಪೂರ್ವಕವಾಗಿ ಮಸ್ಕಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಕೂಡಲೇ ಸ್ಥಳಾಂತರ ನಿರ್ಧಾರ ಹಿಂಪಡೆದು ಪಾಮನಕಲ್ಲೂರಿನಲ್ಲಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್. ಸಿ. ಮಹಾದೇವಪ್ಪ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಹಾಗೂ ಸಮಾಜ ಕಲ್ಯಾಣ ಆಯುಕ್ತರಿಗೆ ಹಲವಾರು ಬಾರಿ ಪತ್ರ ಬರೆದು ಗಮನಕ್ಕೂ ತಂದರು ಆದೇಶ ಇನ್ನೂವರೆಗೂ ಬದಲಾಗಿಲ್ಲ. ಶಾಸಕ ಬಸನಗೌಡ ತುರ್ವಿಹಾಳ ಅವರನ್ನು ಭೇಟಿಯಾಗಿ ಪಾಮನಕಲ್ಲೂರಿನಲ್ಲಿ ವಸತಿ ಶಾಲೆ ಸ್ಥಾಪಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ, ಮಲ್ಲಪ್ಪ ಹೀರೆಮಠ, ಬಸವರಾಜ ಛಲವಾದಿ, ಅಯ್ಯಣ್ಣ ನಾಯಕ, ಅಮರೇಶ, ರಮೇಶ, ಲಕ್ಷ್ಮಣ, ಚನ್ನಬಸವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.